ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ಗುರುವಾರ ಆಟೋ ಚಾಲಕರ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು ಇಂದು ನನ್ನ ಜೀವನದಲ್ಲಿ ಬಹಳ ನೆನಪಿನಲ್ಲಿ ಉಳಿಯಲಿರುವ ದಿನ. ಕಾರಣ ಇಂದು ನಾನು ಪವಿತ್ರ ಆಟೋ ಚಾಲನೆ ಮಾಡಿದ ದಿನ. ನಿಮ್ಮ ಕುಟುಂಬದ ಸದಸ್ಯನಾಗಿ ನಾನು ಇಲ್ಲಿ ನಿಂತಿದ್ದೇನೆ. ಇದಕ್ಕಾಗಿ ನನಗೆ ಹೆಮ್ಮೆ ಇದೆ. ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ನೀವು ದೇಶ ಹಾಗೂ ಜನ ಸೇವಕರು. ಮಧ್ಯಮವರ್ಗ ಹಾಗೂ ಜನ ಸಾಮಾನ್ಯರ ಸಾರಥಿಗಳು.

ಇಡೀ ಪ್ರಪಂಚದಲ್ಲಿ ಈ ವರ್ಗಕ್ಕೆ ಜಾತಿ, ಧರ್ಮದ ಬೇಧವಿಲ್ಲ. ಜನ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿಸುವ ಪವಿತ್ರ ಕೆಲಸ ಮಾಡಿಕೊಂಡು ಬಂದಿದ್ದೀರಿ. ನಾನು ಆಗಾಗ್ಗೆ, ಅರ್ಚಕನ ಪ್ರಭಾವದಿಂದ ಶಿಲೆಯಲ್ಲೂ ಶಂಕರನನ್ನು ಕಾಣಬಹುದು ಎಂಬ ಮಾತು ಹೇಳುತ್ತಿರುತ್ತೇನೆ. ಅದರಂತೆ ಒಬ್ಬ ವ್ಯಕ್ತಿ ಸಾಧನೆಗೆ ನೀವು ಸಂಪರ್ಕದ ವ್ಯವಸ್ಥೆಯಾಗಿದ್ದೀರಿ. ಜನರ ನಂಬಿಕೆ ಗಳಿಸಿದ್ದೀರಿ. ನಿಮಗೆ ಕೋಟಿ ಧನ್ಯವಾದಗಳು ಎಂದರು.
ಇತ್ತೀಚೆಗೆ ನಡೆಯುತ್ತಿರುವ ಸಮೀಕ್ಷೆಗಳಲ್ಲಿ ಶೇ.80 ರಷ್ಟು ಜನ ಕಾಂಗ್ರೆಸ್ ಪಕ್ಷದ ಪರ ಒಲವು ತೋರಿಸುತ್ತಿದ್ದಾರೆ. ನೀವು ದಿನ ನಿತ್ಯ ಗ್ಯಾಸ್, ಡೀಸೆಲ್ ಮೂಲಕ ಗಾಡಿ ಚಾಲನೆ ಮಾಡುತ್ತಿದ್ದು, ಬೆಲೆ ಏರಿಕೆಯಿಂದ ಸರ್ಕಾರ ನಿಮ್ಮ ಜೇಬನ್ನು ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದೆ.

ಕೋವಿಡ್ ಸಮಯದಲ್ಲಿ ನಿಮ್ಮ ಬದುಕಿನ ಮೇಲೆ ಬರೆ ಹಾಕಿದರು. ಈ ಸಮಯದಲ್ಲಿ ನಾವು ಚಾಲಕರಿಗೆ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹ ಮಾಡಿದೆವು. ಪ್ರತಿ ತಿಂಗಳು10 ಸಾವಿರ ರೂ. ಪರಿಹಾರ ನೀಡುವಂತೆ ಕೇಳಿದೆವು. ಆದರೆ ಈ ಸರ್ಕಾರ 5 ಸಾವಿರ ಘೋಷಣೆ ಮಾಡಿ, ಒಂದು ತಿಂಗಳೂ ಅದನ್ನು ಸರಿಯಾಗಿ ನೀಡಲಿಲ್ಲ.
ನಮ್ಮ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಅವರು ಪಕ್ಷದಲ್ಲಿ ಚಾಲಕರ ವಿಭಾಗ ಆರಂಭಿಸಬೇಕು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಪಕ್ಷದಲ್ಲಿ ಚಾಲಕರ ಘಟಕ ಆಂರಂಭಿಸಿದ್ದೇವೆ. ಆ ಮೂಲಕ ನಿಮ್ಮ ಮನೆ ಸದಸ್ಯರಾಗಿದ್ದೇವೆ ಎಂದರು.

ಬೆಲೆ ಏರಿಕೆಯಿಂದ ಪರದಾಡುತ್ತಿರುವ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆ. ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಮುಂದಿನ ಜೂನ್ ನಂತರ ಚಾಲಕರು ಯಾರೂ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಅದೇ ರೀತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ ನೀಡುತ್ತೇವೆ. ಇನ್ನು ಬಡ ಕುಟುಂಬಗಳ ಪ್ರತಿ ಸದಸ್ಯರಿಗೆ ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಉಚಿತ ಅಕ್ಕಿ ನೀಡಲಾಗುವುದು. ಇನ್ನು ನಿರುದ್ಯೋಗಿ ಯುವಕರಿಗೆ ನೆರವು ನೀಡಲು ಪದವೀಧರ ಯುವಕರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಮಾಡಿರುವವರಿಗೆ ಪ್ರತಿ ತಿಂಗಳು 1500 ರೂ.ಗಳನ್ನು ನೀಡಲಾಗುವುದು.
ಪೊಲೀಸರು ನಿಮಗೆ ನೀಡುತ್ತಿರುವ ಕಿರುಕುಳ ತಪ್ಪಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದೆ ನಿಮ್ಮ ಕಾಂಗ್ರೆಸ್ ಸರ್ಕಾರ ಬರಲಿದೆ. ನಿಮ್ಮ ಹೋರಾಟದ ದಿಕ್ಕು ಮೇ ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರುವತ್ತ ಇರಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಆಟೋಗಳ ಮೇಲೆ ಹಾಕಿಕೊಂಡು ಪ್ರಚಾರ ಮಾಡುತ್ತಿರುವವರಿಗೆ ಧನ್ಯವಾದಗಳು. ಈ ಹೊಸ ವರ್ಷದ ಸಂದರ್ಭದಲ್ಲಿ ನಿಮಗೆ ಒಳ್ಳೆಯದಾಗಲಿ, ನಾನು ನಮ್ಮ ಪಕ್ಷದ ನಾಯಕರೆಲ್ಲರೂ ನಿಮ್ಮ ಜತೆ ಇರುತ್ತೇವೆ ಎಂದು ಭರವಸೆ ನೀಡಿದರು.