Siddaramaiha: (ಫೆ.24) ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದು ಮತ್ತು ಆದಾಯ ಹೆಚ್ಚಿಸುವಲ್ಲಿ ವಿಫಲವಾಗಿದ್ದರ ಪರಿಣಾಮವಾಗಿ ಜಾರಿಗೆ ತರುತ್ತಿರುವ ಬಂಡವಾಳ ಹಿಂತೆಗೆತದ ಯೋಜನೆಗೆ ಬ್ಯಾಂಕಿಂಗ್ ವಲಯವನ್ನು ಗುರಿ ಮಾಡಲಾಗಿದೆ. ಆರ್ಥಿಕತೆ ಚೇತರಿಸಿಕೊಳ್ಳಲು ಬ್ಯಾಂಕ್ಗಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ಸರ್ಕಾರ ತರಾತುರಿ ಮಾಡುತ್ತಿರುವುದು ಆತಂಕಕಾರಿ ಮತ್ತು ಆಧಾರರಹಿತ ಆರ್ಥಿಕ ವಿಧಾನವಾಗಿದೆ ಎಂದಿದ್ದಾರೆ.
ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್ಗಳಿಂದ ಬಂಡವಾಳ ಹಿಂತೆಗೆತವನ್ನು ಘೋಷಿಸಿದ್ದಾರೆ. ಇದರಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಆರ್ಥಿಕ ತಜ್ಞರು, ರಾಜಕೀಯ ನಾಯಕರು ಮತ್ತು ಬ್ಯಾಂಕಿಂಗ್ ವಲಯದ ಹಿರಿಯರು ಸಚಿವೆ ನಿರ್ಮಾಲ ಸೀತಾರಾಮನ್ ಅವರ ಅನಾಹುತಕಾರಿ ತೀರ್ಮಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಹಾಗೂ ಠೇವಣಿದಾರರು ಮತ್ತು ಜನಸಾಮಾನ್ಯರೂ ಆತಂಕಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಖಾಸಗಿ ಹಣಕಾಸು ಸಂಸ್ಥೆಗಳ ದುರಾಸೆ
1969 ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದ ಬಳಿಕ ಸಾರ್ವಜನಿಕ ವಲಯದ ಬ್ಯಾಂಕ್ಗಳು ದೇಶದಲ್ಲಿ ಪ್ರಗತಿಪರವಾದ, ಪ್ರೋತ್ಸಾಹದಾಯಕ ಪಾತ್ರ ನಿರ್ವಹಿಸಿವೆ. ಜನ ಸಾಮಾನ್ಯರ ಪ್ರಗತಿ ಮತ್ತು ದೇಶದ ಆರ್ಥಿಕ ಬೆಳವಣಿಗೆ ನಡುವೆ ಸಾರ್ವಜನಿಕ ವಲಯದ ಬ್ಯಾಂಕ್ಗಳು ಕೊಂಡಿಯಾಗಿ ಕೆಲಸ ಮಾಡಿವೆ. ಖಾಸಗಿ ಹಣಕಾಸು ಸಂಸ್ಥೆಗಳ ದುರಾಸೆ ಮತ್ತು ದೌರ್ಜನ್ಯದಿಂದ ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಪರಿಣಾಮಕಾರಿಯಾಗಿದೆ.
ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ, ಉದ್ಯಮಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವುದು ಮತ್ತು ಕೃಷಿಕರ ಮನೆ ಬಾಗಿಲಿಗೂ ಸಾಲ ಸೌಲಭ್ಯಗಳನ್ನು ತಲುಪಿಸುವುದು ಬ್ಯಾಂಕ್ಗಳ ರಾಷ್ಟ್ರೀಕರಣದಿಂದ ಸಾಧ್ಯವಾಗಿತ್ತು. ದೇಶದ ಜನರಲ್ಲಿ ಉಳಿತಾಯದ ಮನೋಭಾವವನ್ನು ಹೆಚ್ಚಿಸಿ, ಉಳಿತಾಯದ ಹಣದ ಠೇವಣಿಗೆ ಬಡ್ಡಿ ಮತ್ತು ಭದ್ರತೆಯನ್ನು ಒದಗಿಸುವ ಜತೆಗೆ ಅಗತ್ಯ ಬಿದ್ದಾಗ ಸುಲಭವಾಗಿ ಸಾಲ ದೊರಕಿಸಿಕೊಳ್ಳುವ ಸುಭದ್ರವಾದ ನೂರಾರು ಮಾರ್ಗಗಳೂ ಬ್ಯಾಂಕ್ಗಳ ರಾಷ್ಟ್ರೀಕರಣದ ಮೂಲಕ ತೆರೆದುಕೊಂಡಿತ್ತು.
ಬ್ಯಾಂಕ್ಗಳ ವಿಲೀನ
ಈ ಎಲ್ಲದರ ಪರಿಣಾಮ 1992ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳು ದೇಶದ ಮೂಲೆ ಮೂಲೆಗೂ ವ್ಯಾಪಿಸಿ 65,000 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ ಎನ್ನುವುದನ್ನು ಹಣಕಾಸು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಕಂಡರೆ ನಿಮಗೆ ಏಕೆ ಆಗುವುದಿಲ್ಲವೋ ಗೊತ್ತಿಲ್ಲ. ಕಳೆದ ವರ್ಷ 10 ರಾಷ್ಟ್ರಖೃತ ಬ್ಯಾಂಕ್ಗಳ ವಿಲೀನ ಘೋಷಿಸಿದಿರಿ.

ಆ ಪ್ರಕಾರ ನಮ್ಮ ಕಾರ್ಪೋರೇಷನ್ ಬ್ಯಾಂಕನ್ನು ಯೂನಿಯನ್ ಬ್ಯಾಂಕ್ನೊಂದಿಗೆ, ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್ನೊಂದಿಗೆ, ವಿಜಯ ಬ್ಯಾಂಕನ್ನು ಬ್ಯಾಂಡ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಲಾಯಿತು. ಇದಕ್ಕೂ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಿದಿರಿ. ಇದರಿಂದ ನಮ್ಮ ರಾಜ್ಯದ ನಾಲ್ಕು ಬ್ಯಾಂಕ್ಗಳು ತಮ್ಮ ಮೂಲ ಆಶಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡು ರಾಷ್ಟ್ರೀಕೃತ ಬ್ಯಾಂಕ್ಗಳ ಸಂಖ್ಯೆ 27 ರಿಂದ 12 ಕ್ಕೆ ಇಳಿದಿದೆ.
ಉದ್ಯೋಗ ನಷ್ಟ
ಇದರಿಂದ ಕನ್ನಡಿಗರ ಪಾಲಿನ ಸಾವಿರಾರು ಉದ್ಯೋಗಗಳು ನಷ್ಟವಾದವು. ಹೀಗೆ ನಮ್ಮ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ವಿಲೀನ ಪ್ರಕ್ರಿಯೆ ಮೂಲಕ ಅರ್ಧ ಮುಗಿಸಿ, ಉಳಿದರ್ಧವನ್ನು ಖಾಸಗೀಕರಿಸಲು ಹೊರಟಿದ್ದೀರಿ.
ಖಾಸಗಿ ಒಡೆತನದ ಬ್ಯಾಂಕ್ಗಳ ಕಾರ್ಯನಿರ್ವಹಣೆ ಶೈಲಿ ಮತ್ತು ಖಾಸಗಿ ಬ್ಯಾಂಕ್ಗಳ ಕಾರ್ಯನಿರ್ವಹಿಸದ ಸ್ವತ್ತುಗಳೇ ಆ ಬ್ಯಾಂಕ್ಗಳ ದಿವಾಳಿತನಕ್ಕೆ ಕಾರಣ ಆಗಿರುವ ಉದಾಹರಣೆಗಳು ಕಣ್ಣ ಮುಂದಿವೆ.

ಲಕ್ಷಾಂತರ ಠೇವಣಿದಾರರರಿಂದ ಸಂಗ್ರಹಿಸಿದ ಸಾವಿರಾರು ಕೋಟಿ ಠೇವಣಿ ಹಣವನ್ನು ಕಾರ್ಪೋರೇಟ್ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಮೂಲಕ ಠೇವಣಿದಾರರ ಉಳಿತಾಯದ ಹಣವನ್ನು ಮುಳುಗಿಸಲಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ರಾಜ್ಯದ ಖಾಸಗಿ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿದ್ದ ಠೇವಣಿದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಸಾಕ್ಷಿ.
ತೆರಿಗೆದಾರರ ಹಣ ಖಾಸಗಿಯವರ ಮಡಿಲಿಗೆ
ದೇಶದ ಆರ್ಥಿಕತೆ ಜತೆ ಬೆಸೆದುಕೊಂಡಿರುವ ಖಾಸಗಿ ಬ್ಯಾಂಕ್ಗಳ ದಿವಾಳಿಕೋರತನದ ಕೆಟ್ಟ ಪರಿಣಾಮಗಳು ಸಮಾಜದ ಮೇಲೆ ಆಗುತ್ತಿವೆ. ಹೀಗಾಗಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ದೇಶದ ತೆರಿಗೆದಾರರ ಹಣ ಮತ್ತು ಸಂಪತ್ತನ್ನು ಮುಲಾಜಿಲ್ಲದೆ ಖಾಸಗಿಯವರ ಮಡಿಲಿಗೆ ಅರ್ಪಿಸಲು ಹೋಗುತ್ತಿರುವುದು ದೇಶದ ಜನರಿಗೆ ಮಾಡುವ ವಂಚನೆ ಆಗುತ್ತದೆ. ನಮ್ಮ ಸಾರ್ವಜನಿಕ ವಲಯದಲ್ಲಿದ್ದ ಸಾರ್ವಜನಿಕರ ಹಣ ಮತ್ತು ಠೇವಣಿಯಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬ್ಯಾಂಕ್ಗಳನ್ನು ಕಾಪಾಡಿ ಆರ್ಥಿಕತೆಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ.
ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರವೇ ಹಲವಾರು ಮಂದಿ ವಂಚಕರು, ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕ್ಗಳಿಗೆ ವಂಚಿಸಿ ದೇಶ ತೊರೆದು ಪರಾರಿಯಾಗಿ ತಲೆಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕೆ ವಂಚಿಸಿ ದೇಶ ತೊರೆದ ಒಬ್ಬೇ ಒಬ್ಬ ದೊಡ್ಡ ವಂಚಕನನ್ನೂ ಬಂಧಿಸಿ ವಾಪಾಸ್ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್ಗಳಿಂದ ಬಂಡವಾಳ ಹಿಂತೆಗೆಯುವುದು ಮತ್ತು ಇವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದರಿಂದ ಆಗುವ ಅಡ್ಡ ಪರಿಣಾಮಗಳು ಗೊತ್ತಿದ್ದೂ ಆ ಬಗ್ಗೆ ಜಾಣ ಕುರುಡುತನ ತೋರಿಸುತ್ತಿದೆ.
ಸಣ್ಣ ಪುಟ್ಟ ಸಾಲಗಾರರ ಆತ್ಮಹತ್ಯೆ
ಸಾವಿರಾರು ಕೋಟಿ ಸಾಲವನ್ನು ದೊಡ್ಡ ಉದ್ಯಮಿಗಳಿಗೆ ಕೊಟ್ಟು ಅವರು ದೇಶ ಬಿಟ್ಟು ಹೋಗುವವರೆಗೂ ಅವರಿಗೆ ಕೆಂಪು ಹಾಸು ಹಾಸುವ ಖಾಸಗಿ ಬ್ಯಾಂಕ್ಗಳು ಸಣ್ಣ ಪುಟ್ಟ ಸಾಲಗಾರರನ್ನು ಮಾತ್ರ ಆತ್ಮಹತ್ಯೆಗೆ ದೂಡುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ.
ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಹಿಂದುಳಿದ ವರ್ಗಗಳು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಪಾಲಿನ ಉದ್ಯೋಗಾವಕಾಶಗಳನ್ನೂ ಕಿತ್ತುಕೊಳ್ಳಲಾಗುತ್ತಿದೆ. ಜತೆಗೆ ಹಿಂದುಳಿದ ಮತ್ತು ಬಡ ಹಗೂ ದಲಿತ ಸಮುದಾಯಗಳ ಆರ್ಥಿಕ ಚಲನೆಗೆ ಅಡ್ಡವಾಗಿ ದೊಡ್ಡ ಗೋಡೆ ಕಟ್ಟುತ್ತಿದ್ದೀರಿ. ಖಾಸಗಿ ಬ್ಯಾಂಕ್ಗಳು ಹೆಚ್ಚೆಚ್ಚು ಲಾಭ ಮಾಡಿಕೊಳ್ಳುವ ಸಲುವಾಗಿ ಡಿಜಟಲ್ ಬ್ಯಾಂಕಿಂಗ್ಗೆ ಜಾರುತ್ತಿವೆ. ಇದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ದೊಡ್ಡ ಪೆಟ್ಟುಕೊಟ್ಟಂತಾಗುತ್ತದೆ.
ಸಾಲದ್ದಕ್ಕೆ ಗ್ರಾಮೀಣ ಜನ ಖಾಸಗಿ ಫೈನಾನ್ಸಿಯರ್ಗಳ ಹಿಡಿತಕ್ಕೆ ಸಿಕ್ಕಿ ನರಳುವಂತೆ ಮಾಡುತ್ತಿದ್ದೀರಿ. ಆದ್ದರಿಂದ ಸಾರ್ವಜನಿಕ ಬ್ಯಾಂಕ್ಗಳ ಖಾಸಗೀಕರಣದ ಹಿಂದೆ ಮೇಲ್ಜಾತಿಗಳ, ಉನ್ನತ ಶ್ರೀಮಂತ ವರ್ಗದ ಮತ್ತು ಕಾರ್ಪೋರೇಟ್ ಶ್ರೀಮಂತರ ಹಿತಾಸಕ್ತಿ ಕಾಯುವ, ಕಾರ್ಪೋರೇಟ್ ವಂಚಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಈ ದೇಶದ ದುಡಿಯುವ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಿರುವ, ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿರುವ, ಬಡ ಮತ್ತು ಮಧ್ಯಮ ವರ್ಗದ ಜನ ಸಮಾನ್ಯರ ಬದುಕಿಗೆ ಮಾರಕ ಆಗಿರುವ, ದೇಶದ ಆರ್ಥಿಕತೆಯನ್ನು ನಾಶ ಮಾಡುವಂಥಾ ಬ್ಯಾಂಕ್ಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆತದ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ.’