Reservation: (ಫೆ.21): ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಪೊಲೀಸ್ ಇಲಾಖೆಯ ಕಾನ್ಸ್ಟೆಬಲ್, ಸಬ್ ಇನ್ಸ್ಪೆಕ್ಟರ್ವರೆಗಿನ ಗೆಜೆಟೆಡ್ ಅಲ್ಲದ ಹುದ್ದೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕರ್ನಾಟಕದ ಆಡಳಿತ ಸುಧಾರಣಾ ಆಯೋಗ-2ರಎರಡು ಮತ್ತು 3ನೇ ವರದಿಯನ್ನು ಸಲ್ಲಿಸಿದರು.
ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು 12.05.2015 ರಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಹ ಪೊಲೀಸ್ ಪಡೆಗಳಲ್ಲಿ ಕಾನ್ಸ್ಟೇಬಲ್ನಿಂದ ಸಬ್-ಇನ್ಸ್ಪೆಕ್ಟರ್ವರೆಗಿನ ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ, ಸಮತಳವಾಗಿ ಮತ್ತು ಪ್ರತಿ ವರ್ಗದಲ್ಲಿ (ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇತರರು) 33% ಮೀಸಲಾತಿಯನ್ನು ಅನುಮೋದಿಸಬಹುದು ಎಂದು ತಿಳಿಸಿದೆ

ಆಯೋಗದ ಶಿಫಾರಸುಗಳು:
- ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಅಂಚೆ ಕಛೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು ಒದಗಿಸಲು ಬಳಸಿಕೊಳ್ಳಬಹುದು. ಪ್ರಸ್ತುತ ಅಂಚೆ ಕಛೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ.
- ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಹೆಚ್ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಸದರಿ ಪ್ರಾಧಿಕಾರಗಳು ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುವದು ಗ್ರಾಮ ಪಂಚಾಯತ್ಗಳ ಬದಲಾಗಿ ಸದರಿ ಪ್ರಾಧಿಕಾರಗಳು ಮಾಡುತ್ತಿದ್ದು ಇದರಿಂದ ಗ್ರಾ ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತರಾಗುತ್ತಿವೆ ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾಮ ಪಂಚಾಯತ್ ಗಳು ಮಾಡಬಹುದು.
- ಭಾರತ ಸರ್ಕಾರವು ತನ್ನ ಸಚಿವಾಲಯಗಳಲ್ಲಿ ಯಾವುದೇ ಕಡತವು ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು ಎಂದು ನಿರ್ಧರಿಸಿರುವಂತೆ ರಾಜ್ಯ ಸರ್ಕಾರವು ಸಹ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. ಪ್ರಸ್ತುತ ರಾಜ್ಯದಲ್ಲಿ ಕಡತಗಳು 5-10 ಹಂತಗಳಲ್ಲಿ ಚಲಾವಣೆಯಾಗುತ್ತಿವೆ.
- ಬಿಬಿಎಂಪಿ ವ್ಯಾಪ್ತಿಯಲ್ಲಿ, ವಲಯಗಳಲ್ಲಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ, ಸಿಟಿ ಕಾರ್ಪೋರೇಷನ್ಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಬಹುದು.
- ಬಿಬಿಎಂಪಿಯ ಮುಖ್ಯ ಆಯುಕ್ತರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮುಖ್ಯ ಆಯುಕ್ತರ ಕೆಲವು ಅಧಿಕಾರಗಳನ್ನು ಉದಾ: 2 ಕೋಟಿವರೆಗಿನ ಬಜೆಟ್ ಕಾಮಗಾರಿಗಳ ಅನುಮೋದನೆ, ವಲಯ ವ್ಯಾಪ್ತಿಯಲ್ಲಿ ಅಭಿಯಂತರರುಗಳ, ಸಿಬ್ಬಂದಿಗಳ ಹಾಗೂ ಗ್ರೂಪ್-ಸಿ ನೌಕರರ ವರ್ಗಾವಣೆ ಮುಂತಾದ ಅಧಿಕಾರಗಳನ್ನು ಪ್ರತ್ಯಾಯೋಜಿಸಿ ವಲಯ ಆಯುಕ್ತರುಗಳಿಗೆ ನೀಡಬಹುದು.
- ಅದೇ ರೀತಿಯಾಗಿ, ಆಯುಕ್ತರು ಬಿಡಿಎ ರವರ ಭೂ ಸ್ವಾಧೀನದ ಅಧಿಕಾರಗಳನ್ನು ಡೆಪ್ಯೂಟಿ ಕಮಿಷನರ್ರವರಿಗೆ, ನಿವೇಶನ ಸಂಬಂಧಿತ ಅಧಿಕಾರಗಳನ್ನು ಕಾರ್ಯದರ್ಶಿ, ಉಪಕಾರ್ಯದರ್ಶಿಗಳಿಗೆ, ರಜೆ ನಗದೀಕರಣ, ರಜೆ ಮಂಜೂರಾತಿ, ವೈದ್ಯಕೀಯ ಬಿಲ್ ಮಂಜೂರಾತಿ ಇತ್ಯಾದಿಗಳನ್ನು ಕಾರ್ಯದರ್ಶಿಗೆ, 1 ಲಕ್ಷದವರೆಗಿನ ಯುಟಿಲಿಟಿ ಬಿಲ್, ಆಕಸ್ಮಿಕ, ಜಾಹೀರಾತು ಬಿಲ್ಗಳ ಪಾವತಿಯನ್ನು ವಿಭಾಗ ಮುಖ್ಯಸ್ಥರಿಗೆ ಮುಂತಾದ ಅಧಿಕಾರಗಳ ಪ್ರತ್ಯಾಯೋಜನೆ ಮಾಡಬಹುದು.
- ಗೃಹ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಎಸ್ಟಿ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಎಂಟು ಇಲಾಖೆಗಳಿಗೆ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ:Humanity: ಹಿಜಾಬ್ ವಿವಾದದ ನಡುವೆ ಮಾನವೀಯತೆ ಮೆರೆದ ಮುಸ್ಲಿಂ ಕುಟುಂಬ ಶಾಲೆಗಾಗಿ 2.5 ಎಕರೆ ಜಮೀನು ದಾನ!