ಮೈಸೂರು: (ಫೆ.10) Commission Mafia: ಪ್ರಮುಖ ಕಾಮಗಾರಿಗಳಿಗೆ ಗುತ್ತಿಗೆ ನೀಡುವಾಗ ಶೇ.4೦ ರಷ್ಟು ಕಮಿಷನ್ ಭ್ರಷ್ಟಾಚಾರ ನಡೆಯುತ್ತಿರುವುದೇ ಕಾಮಗಾರಿಗಳು ಕಳಪೆಯಾಗಲು ಕಾರಣವಾಗುತ್ತಿದೆ. ಈ ಸಂಬಂಧ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಆಗ್ರಹಿಸಿದೆ.
ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, 2009ರ ಮೊದಲು ಸರ್ಕಾರದ ಮೊದಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.೫ರಷ್ಟು ಮಾತ್ರವೇ ಕಮಿಷನ್ ಇರುತ್ತಿತ್ತು. ನಂತರದಲ್ಲಿ ಶೇ. 40ಕ್ಕೆ ಏರಿಕೆಯಾಗಿದೆ. ಅಲ್ಲದೆ, ಶೇ.15-16ರಷ್ಟು ತೆರಿಗೆಯನ್ನೂ ಪಾವತಿಸಬೇಕಿದೆ. ಸಾಲದ್ದಕ್ಕೆ ಬಿಲ್ ಪಾವತಿಸುವುದಕ್ಕೂ ಕಮಿಷನ್ ನೀಡಬೇಕಿದೆ. ಇನ್ನು ಉಳಿಯುವ ಶೇ.40-44 ರಷ್ಟು ಹಣದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಇದರೊಡನೆ ಸಣ್ಣಪುಟ್ಟ ಮೊತ್ತದ ಗುತ್ತಿಗೆ ಕಾಮಗಾರಿಗಳನ್ನೆಲ್ಲ ಪ್ಯಾಕೇಜ್ ವ್ಯವಸ್ಥೆ ಅಡಿಯಲ್ಲಿ ಹೊರ ರಾಜ್ಯದವರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಶಾಸಕರೊಬ್ಬರನ್ನು ಪ್ರಶ್ನಿಸಿದಲ್ಲಿ, ಇಲ್ಲಿನ ಸಣ್ಣಪುಟ್ಟ ಗುತ್ತಿಗೆದಾರರಿಂದ ಸಣ್ಣ ಸಣ್ಣ ಪ್ರಮಾಣದಲ್ಲಿ ಕಮಿಷನ್ ಬರುತ್ತದೆ. ಆದರೆ ಒಂದೇ ಬಾರಿ ಪ್ಯಾಕೇಜ್ ಎಂಬಂತೆ ನೀಡಿದಲ್ಲಿ ಇಡುಗಂಟು ಬರುತ್ತದೆ ಎಂದು ತಿಳಿಸಿದ್ದಾರೆಂದು ದೂರಿದ್ದಾರೆ.
ಯಾವುದೇ ಸರ್ಕಾರದ ಬಂದರೂ ಅಧಿಕಾರಿ ವರ್ಗ, ಜನಪ್ರತಿನಿಧಿಗಳ ಹಾದಿಯಾಗಿ ಕಮಿಷನ್ ಪಡೆಯುವ ಪ್ರಮಾಣ ಹೆಚ್ಚಾಗುತ್ತಿದೆ. ಇದರ ವಿರುದ್ಧ ಮಾರ್ಚ್ ತಿಂಗಳ ಕೊನೆಯ ವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಿ.ಕೆಂಪಣ್ಣ ತಿಳಿಸಿದ್ದಾರೆ.
ಈ ಕುರಿತು ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳಿಗೆ ತನಿಖೆಗೆ ಆಗ್ರಹಿಸಿ ಪತ್ರ ಬರೆದರೂ ಪ್ರೋಂಜನವಾಗಲಿಲ್ಲ. ಹೀಗಾಗಿ ಪತ್ರಿಕೆಗಳ ಮುಂದೆ ಬರಬೇಕಾಯಿತು. ಜೊತೆಗೆ, ಶೇ. 4೦ ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂಬ ತಮ್ಮ ಆರೋಪವನ್ನು ಸಮಿತಿ ರಚಿಸಿ ತನಿಖೆ ನಡೆಸಿದರೆ ತಾವು ತಮ್ಮ ಆರೋಪ ಸಾಬೀತು ಪಡಿಸಲು ಸಿದ್ಧ. ಅದಕ್ಕೆ ಸೂಕ್ತ ದಾಖಲೆಗಳೂ ನಮ್ಮ ಬಳಿಯಿವೆ ಎಂದು ಹೇಳಿದ್ದಾರೆ.
ಜೊತೆಗೆ ಈ ಪ್ಯಾಕೇಜ್ ಗುತ್ತಿಗೆಗಳು ಭಾರಿ ಮೊತ್ತದ್ದವಾಗಿರುವ ಕಾರಣ ಇಲ್ಲಿನ ಸಣ್ಣಪುಟ್ಟ ಗುತ್ತಿಗೆದಾರರಿಂದ ಭರಿಸಲು ಸಾಧ್ಯವಾಗುವುದಿಲ್ಲ. ಇದರೊಡನೆ ಟೆಂಡರ್ ಅರ್ಹತೆಗಳನ್ನು ಸಹಾ ಹೊರ ರಾಜ್ಯದವರಿಗೆ ಅನುಕೂಲವಾಗುವಂತೆ ರೂಪಿಸುತ್ತಿದ್ದಾರೆ. ಭ್ರಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳಿಂದ ಈ ರೀತಿ ಆಗುತ್ತಿದೆ ಎಂದು ದೂರಿದ್ದಾರೆ.
ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಡಿ. ಕೃಷ್ಣ, ಕೆ.ಎ. ಶಾಂತೇಗೌಡ, ಪಿ.ಸಿ. ದಿನೇಶ್, ಮಂಜುನಾಥ್, ಇನ್ನಿತರ ಗುತ್ತಿಗೆದಾರರು ಹಾಜರಿದ್ದರು.
ಪ್ರಮುಖ ಬೇಡಿಕೆಗಳು
- ಭ್ರಷ್ಟಾಚಾರ ಕುರಿತು ತನಿಖೆ ನಡೆಯಬೇಕು
- ಪ್ಯಾಕೇಜ್ ಪದ್ಧತಿ ರದ್ದುಗೊಳಿಸಬೇಕು
- ಬಾಕಿ ಉಳಿಸಿಕೊಂಡಿರುವ ೨೦ ಸಾವಿರ ಕೋಟಿ ರೂ.,ಗಳನ್ನು ಗುತ್ತಿಗೆದಾರರಿಗೆ ಕೂಡಲೇ ಬಿಡುಗಡೆಗೊಳಿಸಬೇಕು.
ಹೊರರಾಜ್ಯದವರಿಗೇ ಹೆಚ್ಚಿನ ಟೆಂಡರ್
ರಾಜ್ಯದಲ್ಲಿ ಸುಮಾರು 12 ಸಾವಿರ ಕ್ಲಾಸ್ 1 ಕಂಟ್ರಾಕ್ಟರ್ಗಳು ಇದ್ದಾರೆ. ಅವರಲ್ಲಿ 297 ಮಂದಿ ಹೊರರಾಜ್ಯದವರೇ ಹಾಗಿದ್ದಾರೆ. ಆದರೆ, ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚಿನ ಕಮಿಷನ್ ಪಡೆಯುವ ಆಸೆಗೆ ಹೊರಾರಾಜ್ಯದವರಿಗೇ ಹೆಚ್ಚಿನ ಕಂಟ್ರಾಕ್ಟ್ಗಳನ್ನು ನೀಡಲಾಗುತ್ತಿದೆ.– ಡಿ.ಕೆಂಪಣ್ಣ, ಅಧ್ಯಕ್ಷ, ರಾಜ್ಯ ಗುತ್ತಿಗೆದಾರರ ಸಂಘ