BJP Govt: (ಜ.30): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರಕ್ಕೆ ನೆನ್ನೆಯಷ್ಟೆ 6 ತಿಂಗಳಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾದರೂ ಭ್ರಷ್ಟಾಚಾರ ಮುಂದುವರೆದಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗಿದೆ. ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ, ಭ್ರಷ್ಟಾಚಾರ ಹಿಂದಿನಂತೆಯೇ ಮುಂದುವರೆದಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎರಡೂವರೆ ವರ್ಷದ ಸಾಧನೆಗಳ ಪುಸ್ತಕದಲ್ಲಿ ಸಾಧನೆಗಿಂತ ಭರವಸೆಗಳೇ ಜಾಸ್ತಿ ಇವೆ ಎಂದು ಹೇಳಿದ್ದಾರೆ.
ಆರ್ಥಿಕ ವರ್ಷಕ್ಕೆ 2 ತಿಂಗಳು ಬಾಕಿ:
ಇದುವರೆಗೂ ಈಡೇರದ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭರವಸೆಗಳಿಗೆ ಈ ಪುಸ್ತಕ ಹೊಸ ಸೇರ್ಪಡೆ.ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ರೂ. 1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಂದರೆ ವರ್ಷಕ್ಕೆ ಕನಿಷ್ಠ ರೂ.30,000 ಕೋಟಿ. ಈ ವರ್ಷ ಖರ್ಚು ಮಾಡಿರುವುದು ಬರೀ ರೂ. 6,300 ಕೋಟಿ.

ನಮ್ಮ ಸರ್ಕಾರದ ಸ್ಥಾಪಿಸಿದ್ದ ಗ್ರಾಮೀಣ ಸೇವಾ ಕೇಂದ್ರಗಳನ್ನು ಈಗ ಗ್ರಾಮ ಒನ್ ಎಂದು ಮರುನಾಮಕರಣ ಮಾಡಲು ಹೊರಟಿದ್ದಾರೆ. ಯೋಜನೆಗಳ ಹೆಸರು ಬದಲಿಸುವುದನ್ನು ಸಾಧನೆ ಎಂದು ಯಾರಾದರೂ ಕರೆಯುತ್ತಾರಾ?ರಾಜ್ಯ ಸರ್ಕಾರ ಜಾಹಿರಾತಿನಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದೆ. ಈ ವರೆಗೆ ಕ್ರಿಯಾ ಯೋಜನೆ ರೂಪಿಸಿ ಬಿಡುಗಡೆ ಮಾಡಿರೋದು 1200 ಕೋಟಿ ರೂಪಾಯಿ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉಳಿದಿರೋದು ಎರಡು ತಿಂಗಳು ಮಾತ್ರ. ಈ ಅವಧಿಯಲ್ಲಿ ಅನುದಾನಕ್ಕೂ ಆರ್ಥಿಕ ಇಲಾಖೆ ಅನುಮತಿ ಸಿಗಲ್ಲ, ಒಂದು ರೂಪಾಯಿಯೂ ಬಿಡುಗಡೆ ಆಗಲ್ಲ. ಕೋಟ್ಯಾಂತರ ರೂಪಾಯಿ ಸುರಿದು ಸುಳ್ಳು ಜಾಹಿರಾತು ನೀಡಿರುವುದೇ ಸಾಧನೆ.ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ್ದೊಂದೆ ಬಿಜೆಪಿ ಸಾಧನೆ, ಈ ಭಾಗಕ್ಕೆ ಹೆಚ್ಚುವರಿ ಹಣಕಾಸಿನ ನೆರವು ಶೂನ್ಯ ಎಂದರು.
ನಿರುದ್ಯೋಗದ ಸಮಸ್ಯೆಯಿಂದ ಆತ್ಮಹತ್ಯೆ:
ಸಂವಿಧಾನದ 371 ನೇ ವಿಧಿಗೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದವರು ಎನ್.ಡಿ.ಎ ಸರ್ಕಾರದ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ. ಶ್ರೀಮತಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಸಂವಿಧಾನದ 371 ನೇ ವಿಧಿಗೆ ತಿದ್ದುಪಡಿ ತಂದು, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು ಮನಮೋಹನ್ ಸಿಂಗ್ ಅವರ ಯು.ಪಿ.ಎ ಸರ್ಕಾರ. ಇದನ್ನು ಜನ ಮರೆಯಬಾರದು.

ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಇದಕ್ಕಿಂತ ಅಸಹ್ಯ ಬೇರೇನೂ ಇಲ್ಲ. ಸರ್ಕಾರದ ಈ ನಡೆ ಲಕ್ಷಾಂತರ ಜನರ ಸಾವನ್ನು ಸಂಭ್ರಮಿಸಿದಂತೆಯೇ ಸರಿ.ಕೊವಿಡ್ ನಿಂದ ಮರಣ ಹೊಂದಿದ 27,074 ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ 50,000 ಪರಿಹಾರ ನೀಡಲಾಗಿದೆ.
ರಾಜ್ಯ ಸರ್ಕಾರ 13,541 ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ನೀಡಿದೆ. ಇನ್ನುಳಿದ ಕುಟುಂಬಗಳಿಗೆ ಪರಿಹಾರ ಸಿಗೋದು ಯಾವ ಕಾಲಕ್ಕೆ?ಕೊರೊನಾ ಉಲ್ಬಣಗೊಂಡ ಸಂದರ್ಭದಲ್ಲಿ ಉಂಟಾದ ನಿರುದ್ಯೋಗ ಸಮಸ್ಯೆಯಿಂದಾಗಿ 1.57 ಲಕ್ಷ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎನ್.ಸಿ.ಆರ್.ಬಿ ವರದಿ ಹೇಳಿದೆ. ಇದಕ್ಕೆ ಯಾರು ಹೊಣೆ? ಇದನ್ನು ಬಿಜೆಪಿ ಸರ್ಕಾರದ ಸಾಧನೆ ಎಂದು ಪರಿಗಣಿಸಬಹುದಾ?ಕೊರೊನಾ ಸಂದರ್ಭದಲ್ಲಿ ಕಾರ್ಮಿಕರಿಗೆ 237 ಕೋಟಿ ರೂಪಾಯಿ ಪರಿಹಾರ ಕೊಟ್ಟಿದ್ದೇವೆ ಎಂದು ರಾಜ್ಯ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತೆ ಎಂದು ಟೀಕಿಸಿದ್ದಾರೆ.
ನಷ್ಟದ ಹಾದಿಯಲ್ಲಿ ಎಪಿಎಂಸಿ:
ಈ ಕಾರ್ಮಿಕರ ಕಲ್ಯಾಣ ನಿಧಿ ಕಾರ್ಮಿಕರೇ ನೀಡಿರುವ ಹಣ, ಸರ್ಕಾರ ತನ್ನ ಕೈಯಿಂದ ಕೊಟ್ಟಿರುವುದಲ್ಲ.ಪ್ರವಾಹದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡುವಂತೆ ಸದನದಲ್ಲಿ ನಾನು ಒತ್ತಾಯ ಮಾಡಿದ್ದೆ, ಕೊನೆಗೆ ಎರಡು ಪಟ್ಟು ಮಾಡಿದ್ರು, ಆದರೆ ಇವತ್ತಿನವರೆಗೆ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಿಲ್ಲ.

ಬಿಜೆಪಿಯವರು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ ಎನ್ನುತ್ತಾರೆ, ನಮ್ಮ ಸರ್ಕಾರದ ವಿದ್ಯಾಸಿರಿ, ಅರಿವು ಯೋಜನೆಯನ್ನು ನಿಲ್ಲಿಸಿದ್ದಾರೆ.ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳೋದೇ ಸಾಧನೆಯ?ರಾಜ್ಯ ಸರ್ಕಾರ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಕೃಷಿ ಉತ್ಪನ್ನಗಳ ಖರೀದಿಗೆ ಮುಕ್ತ ಅವಕಾಶ ನೀಡಿದ್ದರಿಂದ ದಲ್ಲಾಳಿಗಳು ಲಾಭ ಹೊಂದಿದರೆ, ಎ.ಪಿ.ಎಂ.ಸಿ ಗಳು ನಷ್ಟದ ಹಾದಿ ಹಿಡಿದಿವೆ.
ಎ.ಪಿ.ಎಂ.ಸಿ ಗಳಿಂದ 2019-20 ರಲ್ಲಿ 600 ಕೋಟಿ ಆದಾಯ ಬಂದಿತ್ತು, ಈಗದು 106 ಕೋಟಿಗೆ ಇಳಿದಿದೆ.ಕನಿಷ್ಠ ಬೆಂಬಲ ಬೆಲೆ ನೀಡಿ ಬೆಳೆಗಳ ಖರೀದಿ ಮಾಡುತ್ತಿಲ್ಲ. 2020-21 ರಲ್ಲಿ 12 ಲಕ್ಷ ಟನ್ ಭತ್ತ ಖರೀದಿ ಮಾಡಬೇಕೆಂದು ನಿರ್ಧಾರ ಮಾಡಿದ್ದರು, ಈ ಬಾರಿ ಕೇವಲ 5 ಲಕ್ಷ ಟನ್ ಖರೀದಿ ಮಾಡಲು ತೀರ್ಮಾನಿಸಿದ್ದಾರೆ. ರಾಗಿ ಖರೀದಿಯನ್ನು 5 ಲಕ್ಷ ಟನ್ ನಿಂದ 2 ಲಕ್ಷ ಟನ್ ಗೆ ಇಳಿಸಿದ್ದಾರೆ.
ತೆರೆಗೆ ಮೂಲಕ ದರೋಡೆ:
ಈ ವರ್ಷ 2 ಲಕ್ಷ ಟನ್ ತೊಗರಿ ಖರೀದಿ ಮಾಡಬೇಕಿತ್ತು, ಆದರೆ ಈ ವರೆಗೆ ಖರೀದಿಸಿರುವುದು 40,000 ಟನ್ ಮಾತ್ರ.ತೊಗರಿ ಬೆಳೆದ ರೈತರ ಕಷ್ಟ ಕೇಳುವವರು ಯಾರು? ಕೊರೊನಾ ಕಾಲದಲ್ಲಿ ಕಾರ್ಪೊರೇಟ್ ಕಂಪನಿಗಳು 12.5 ಲಕ್ಷ ಕೋಟಿ ಲಾಭ ಗಳಿಸಿವೆ. ಆದರೂ ಅವರ ಮೇಲೆ ಈ ಹಿಂದೆ ವಿಧಿಸುತ್ತಿದ್ದ 30% ಕಾರ್ಪೊರೇಟ್ ತೆರಿಗೆಯನ್ನು 22.5% ಗೆ ಇಳಿಸಲಾಗಿದೆ.

ಸಾಮಾನ್ಯ ಜನ ಖರೀದಿ ಮಾಡುವ ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ, ಸಿಮೆಂಟ್, ರಸ ಗೊಬ್ಬರದ ಮೇಲೆ ತೆರಿಗೆ ಹೆಚ್ಚು ಮಾಡಲಾಗಿದೆ. ಗ್ಯಾಸ್ ಗೆ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಲಾಗಿದೆ. ಈ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದು ಶ್ರೀಮಂತರ ಹೊಟ್ಟೆ ತುಂಬಿಸುತ್ತಿದೆ.2017-18 ರ ನನ್ನ ಬಜೆಟ್ 2.02 ಲಕ್ಷ ಕೋಟಿ ರೂಪಾಯಿ ಇತ್ತು, ಈ ವರ್ಷದ ಬಜೆಟ್ ಗಾತ್ರ 2.47 ಲಕ್ಷ ಕೋಟಿ.
ನಮ್ಮ ಸರ್ಕಾರ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗೆ ನೀಡಿದ್ದ ಹಣ 30,150 ಕೋಟಿ, ಈ ವರ್ಷ ನೀಡಿರುವ ಹಣ 25,000 ಕೋಟಿ.ಬಜೆಟ್ ಗಾತ್ರ ಹೆಚ್ಚಾದಂತೆ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗೆ ಮೀಸಲಿಡಬೇಕಿದ್ದ ಹಣ ಕೂಡ ಹೆಚ್ಚಾಗಬೇಕಿತ್ತು, ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ಇಳಿಕೆ ಆಗುತ್ತಿರುವುದು ಏಕೆ?ಶೋಷಿತರ ಜನರನ್ನು ಕಂಡರೆ ಬಿಜೆಪಿಗೆ ಯಾಕಿಷ್ಟು ದ್ವೇಷ?ಗಂಗಾ ಕಲ್ಯಾಣ ಯೋಜನೆಗೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2017-18 ರಲ್ಲಿ 300 ಕೋಟಿ ಖರ್ಚು ಮಾಡಿತ್ತು ಎಂದು ಹೇಳಿದರು.
ಟೆಂಡರ್ ಹೆಸರಿನಲ್ಲಿ ಕಮಿಷನ್:
ಈ ವರ್ಷದ ಬಜೆಟ್ ನಲ್ಲಿ 30 ಕೋಟಿ ಮಾತ್ರ ನೀಡಿದ್ದಾರೆ. ಇದೇನಾ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು? ಪರಿಶಿಷ್ಟ ಜಾತಿ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಮ್ಮ ಸರ್ಕಾರ ಇದ್ದಾಗ 2017-18 ರಲ್ಲಿ 164 ಕೋಟಿ ಹಣ ನೀಡಿದ್ದೆ, ಈ ವರ್ಷ ಅದನ್ನು ರೂ. 50 ಕೋಟಿಗೆ ಇಳಿಸಿದ್ದಾರೆ.
ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಟಿ.ಎಸ್.ಪಿ ಯೋಜನೆ ಅಡಿ ಸ್ವ ಉದ್ಯೋಗ ಕೈಗೊಳ್ಳುವ ಬುಡಕಟ್ಟು ಜನಾಂಗದ ಜನರಿಗಾಗಿ 63 ಕೋಟಿ ರೂಪಾಯಿ ಅನುದಾನ ನೀಡಿದ್ದೆವು, ಈ ವರ್ಷ ಕೇವಲ ರೂ. 20 ಕೋಟಿ ಅನುದಾನ ನೀಡಿದ್ದಾರೆ.ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಅಧಿಕಾರಿಗಳು ಸರ್ಕಾರಿ ಟೆಂಡರ್ ಗಳಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ಪ್ರಧಾನಿ ಅವರಿಗೆ ದೂರು ನೀಡಿದ್ದಾರೆ.
ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವ ಪ್ರಧಾನಿ ಮೋದಿಯವರು ರಾಜ್ಯ ಬಿಜೆಪಿ ಸರ್ಕಾರದ ಲಂಚಾವತಾರವನ್ನು ಕಂಡರೂ ಕಾಣದಂತೆ ಸುಮ್ಮನಿರುವುದು ಏಕೆ? ಈ ಕಮಿಷನ್ ದಂಧೆಯಲ್ಲಿ ಅವರ ಪಾಲೆಷ್ಟು?ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.