ಬೆಂಗಳೂರು: (ಜ.23) Justice K L Manjunath: ಹೃದಯಾಘಾತದಿಂದ ತಡರಾತ್ರಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಲ್ ಮಂಜುನಾಥ್ ಅವರು ವಿಧಿವಶರಾಗಿದ್ದಾರೆ.
ಜಸ್ಟಿಸ್ ಕೆ.ಎಲ್ ಮಂಜುನಾಥ್ ಅವರು 1974 ರಲ್ಲಿ ವಕೀಲರಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಅಭ್ಯಾಸ ಮಾಡಿದ್ದರು. 2000 ರಂದು ಉಚ್ಚನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು 2001 ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಮಂಜುನಾಥ್ ಅವರು ನಿಧನರಾಗಿದ್ದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಯವರೆಗೆ ಅಂತಿಮ ದರ್ಶನ ಇರಲಿದ್ದು 3:00 ಗಂಟೆಗೆ ನೆಲಮಂಗಲದ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದವರು ಹೇಳಿದ್ದಾರೆ.

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ
ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ನದಿ ನೀರು ಮತ್ತು ಗಡಿ ರಕ್ಷಣೆ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಚೌಕಟ್ಟಿನ ಒಳಗೇ ಮಾನವೀಯ ಮೌಲ್ಯ ಹಾಗೂ ಜನಪರ ಕಾಳಜಿ ಮೆರೆದಿದ್ದ ಮಂಜುನಾಥ್ ಅವರು ನ್ಯಾಯಾಂಗ ವ್ಯವಸ್ಥೆಯ ಘನತೆ, ಗೌರವಗಳನ್ನು ಎತ್ತಿ ಹಿಡಿದಿದ್ದರು. ಅವರ ನಿಧನ ಬಹಳ ನೋವು ತಂದಿದೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೈತ್ರಿ ಸರಕಾರದ ಅವಧಿಯಲ್ಲಿ ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ರಚಿಸಿದ ಕರ್ನಾಟಕ ರಾಜ್ಯ ನದಿ ನೀರು ಮತ್ತು ಗಡಿ ರಕ್ಷಣೆ ಆಯೋಗಕ್ಕೆ ನ್ಯಾ. ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಆಯೋಗವು ಸರಕಾರಕ್ಕೆ ಅನೇಕ ಉಪಯುಕ್ತ ಸಲಹೆ ಮತ್ತು ಶಿಫಾರಸ್ಸುಗಳನ್ನು ನೀಡಿದೆ ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.
ಮೂಲತಃ ಚನ್ನರಾಯಪಟ್ಟಣದ ಕಾಂತರಾಜಪುರದವರಾದ ನ್ಯಾ. ಮಂಜುನಾಥ್ ಅವರು ವಕೀಲಿ ವೃತ್ತಿ ಅವಧಿಯಲ್ಲಿ ಬಡವರಿಗೆ, ದೀನ, ದಲಿತರಿಗೆ ಉಚಿತ ಕಾನೂನು ಸೇವೆ ಒದಗಿಸಿದ್ದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿಯೂ ಕಾನೂನು ಹೋರಾಟ ನಡೆಸಿದ್ದರು. ಅವರು ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಹಲವು ಅತ್ಯಮೂಲ್ಯ ತೀರ್ಪುಗಳನ್ನು ನೀಡಿದ್ದರು ಎಂದು ಶಿವಕುಮಾರ್ ಅವರು ಶ್ಲಾಘಿಸಿದ್ದಾರೆ.
ನ್ಯಾ. ಮಂಜುನಾಥ್ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು, ಅಭಿಮಾನಿಗಳಿಗೆ ನೀಡುವಂತೆ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.