ಬೆಂಗಳೂರು (ಡಿ.6): Violence’s Against Christians ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದರೆ, ಅದನ್ನು ತಿಪ್ಪೆಗೆ ಎಸೆಯುವ ಅಧಿಕಾರ ಸುಪ್ರಿಂ ಕೋರ್ಟಿಗೆ ಇದೆ ಎಂದು ಹಿರಿಯ ನ್ಯಾಯವಾದಿ ಬಿ.ಟಿ.ವೆಂಕಟೇಶ್ ತಿಳಿಸಿದರು.
ನಗರದ ಕ್ವಿನ್ಸ್ ರಸ್ತೆಯ ಕೃಷಿ ಭವನ ಸಭಾಂಗಣದಲ್ಲಿ ನೆನ್ನೆ ನೆಡೆದ ಅಸೋಸಿಯೇಶನ್ ಫಾರ್ ಪ್ರೊಟಿಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಆಯೋಜಿಸಿದ್ದ ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು’ ಎಂಬ ಕುರಿತ ಸತ್ಯಶೋಧನಾ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆಡಳಿತ ನಡೆಸುವ ಸರಕಾರಗಳು ಜಾರಿಗೆ ತರುವ ಕಾನೂನುಗಳಿಂದ ಮೂಲಭೂತ ಕಾನೂನುಗಳಿಗೆ ಧಕ್ಕೆಯಗಬಾರದು. ಸರಕಾರಗಳು ಕಾನೂನುಗಳನ್ನು ಜಾರಿಗೊಳಿಸಬಹುದು.
ಸಂವಿಧಾನದ ಆಶಯ ಇರುವುದು,ಹಕ್ಕುಗಳಿಗೆ ಧಕ್ಕೆಯಾಗುವ ಅಂಶ ಬೆಳಕಿಗೆ ಬಂದರೆ, ಅದನ್ನು ತಿಪ್ಪೆಗೆ ಎಸೆಯುವ ಅಧಿಕಾರಿ ಸುಪ್ರೀಂ ಕೋರ್ಟಿಗೆ ಇದೆ.ಇದನ್ನು ಆಡಳಿತ ವರ್ಗ ಮರೆಯಬಾರದು ಎಂದು ಹೇಳಿದರು.
ಬಲಪಂಥೀಯರಿಗೆ ಬೆಂಬಲ:
ಸಂವಿಧಾನದಲ್ಲಿ ಯಾರೂ ಯಾವುದೇ ಧರ್ಮ ಸ್ವೀಕರ ಮಾಡುವ ಸ್ವತಂತ್ರ ಅಥವಾ ಅದನ್ನು ಬಿಟ್ಟು ಇರುವ ಮೂಲಭೂತ ಹಕ್ಕು ಸಂವಿಧಾನ ನೀಡಿದೆ.
ರಾಜ್ಯ ಸರಕಾರ ಜಾರಿಗೆ ಹೊರಟಿರುವ ಮತಾಂತರ ತಡೆ ಕಾನೂನು ಅನಗತ್ಯ.ಹೀಗಿರುವಾಗ ಸಂವಿಧಾನ ವಿರೋಧಿ ನಡೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಲಪಂಥೀಯರ ಕೃತ್ಯಗಳನ್ನು ಬಹಿರಂಗವಾಗಿ
ಸಮರ್ಥಿಸಿಕೊಳ್ಳುವುದು ತಪ್ಪು.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ವ್ಯಕ್ತಿಯೇ ಅವರ ನೆರವಿಗೆ ನಿಲ್ಲುವುದು ಸೂಕ್ತವಲ್ಲ. ಪಟ್ಟಭದ್ರ ಶಕ್ತಿಗಳ ಸಂಖ್ಯೆ ಕಡಿಮೆ ಇದ್ದರೂ, ಅವರ ಕೃತ್ಯ, ಚಟುವಟಿಕೆಗಳಿಗೆ ರಾಜಕಾರಣಿಗಳು ಬಹಿರಂಗವಾಗಿ ನೆರವಿಗೆ ಬರುತ್ತಾರೆ ಎಂದು ಟೀಕಿಸಿದರು.
ಪುಂಡ ಪೋಕರಿಗಳಿಗೆ ರಾಜಕೀಯ ಬೆಂಬಲ:
ರಾಜ್ಯದಲ್ಲಿ ಅಲ್ಪಸಮುದಾಯವನ್ನು ನಿರಂತರವಾಗಿ ಗುರಿಯಾಗಿಸಿಕೊಂಡು ಹಲ್ಲೆ ನೆಡೆಯುತ್ತಿದೆ.
ಮುಸ್ಲಿಮ್, ದಲಿತ, ಕ್ರೈಸ್ತರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಪುಂಡ ಪೋಕರಿಗಳೇ ದೌರ್ಜನ್ಯವೆಸುವ ಕೃತ್ಯಗಳು ನಡೆಯುತ್ತಿವೆ. ಇಂಥವರಿಗೆ ಆಡಳಿತ ವರ್ಗ, ರಾಜಕೀಯ ಬಲ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದೇಶದೆಲ್ಲೆಡೆ ಈವರೆಗೂ 51 ಜನರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಪೈಕಿ ಹಲವರು ಕೋರ್ಟಿಗೆ ಅಲೆಯಲು ತಮ್ಮ ಮನೆ ಮಠಗಳನ್ನು ಮಾರಾಟ ಮಾಡಿಕೊಂಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಅಸೋಸಿಯೇಶನ್ ಫಾರ್ ಪ್ರೊಟಿಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮ ಆಚರಿಸುವ ಸ್ವತಂತ್ರ:
ಒಬ್ಬರು ಯಾವುದೇ ಧರ್ಮವನ್ನು ಆಚರಿಸಲು ಸಂವಿಧಾನ ಹಕ್ಕು ನೀಡಿದೆ. ಹೀಗಿರುವಾಗ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಎಂದು ಬೆಂಗಳೂರು ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೋ ಅವರು ಪ್ರಶ್ನಿಸಿದರು.
ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ ರಾಜ್ಯ ಸರಕಾರ ಅರಿತು ತನ್ನ ನಿಲುವು ಬದಲಾವಣೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವರ್ಷದಲ್ಲಿ 305 ಪ್ರಕರಣಗಳು:
ಎಪಿಸಿಆರ್ (APCR)ಅಧ್ಯಕ್ಷ ಪಿ.ಉಸ್ಮಾನ್ ಮಾತನಾಡಿ, ಇದೇ ವರ್ಷದಲ್ಲಿ ದೇಶದೆಲ್ಲೆಡೆ ಕ್ರೈಸ್ತರ ಮೇಲೆ ದಾಳಿ ನಡೆಸಿರುವ 305 ಪ್ರಕರಣಗಳು ವರದಿಯಾಗಿವೆ.
ಸರಕಾರಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು.ಜೊತೆಗೆ, ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಪಿಸಿಆರ್ ಸಂಸ್ಥಾಪಕ ಸದಸ್ಯ ಎಂ.ಖಾಝೀ, ಪ್ರಧಾನ ಕಾರ್ಯದರ್ಶಿ ಎಸ್.ಮುಹಮ್ಮದ್ ನಿಯಾಝ್ ಸೇರಿದಂತೆ ಪ್ರಮುಖರಿದ್ದರು.