ಬೆಂಗಳೂರು: (ಡಿ.1): Kavi Raj:ಕನ್ನಡ ಚಿತ್ರರಂಗದ ಸಾಹಿತ್ಯ ಬರಹರಾಗಿರುವ ಕವಿರಾಜ್ ಅವರು ಆಹಾರ ಪದ್ಧತಿಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
ಸಾಮಾಜಿಕ ಜಾಲತಾಣದಲ್ಲಿ ‘ಬಾಡೇ ನಮ್ಮ ಗಾಡು’ ಎಂಬ
ಅಭಿಯಾನ ನಡೆಯುತ್ತಿರುವ ಹಿನ್ನಲೆ ಕವಿರಾಜ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
ಕೀಳರಿಮೆ ಬೇಡ:
ಸಸ್ಯಾಹಾರ, ಮಾಂಸಹಾರದ ಬಗ್ಗೆ ಜನರು ಕೀಳರಿಮೆ ಬಿಡಬೇಕು.ಹಾಗೂ ಮಾಂಸಹಾರಕ್ಕೆ ‘ ಹೊಲಸು’ ಎಂಬ ಅರ್ಥದಿಂದ ಕರೆದು, ತಾವು ತಿನ್ನುವ ಆಹಾರವನ್ನು ಕೀಳಾಗಿ ನೋಡುತ್ತಾರೆ ಹಾಗೂ ವಾರಗಳು, ಹಬ್ಬಗಳು ಮಾಂಸಹಾರವನ್ನು ತಿನ್ನದೆ ಉಳಿದ ದಿನ ತಿನ್ನುತ್ತಾ ಸ್ಪ್ಲಿಟ್ ಪರ್ಸನಾಲಿಟಿ ಎಂಬಂತೆ ಇರುತ್ತಾರೆ.
ತಿನ್ನುವ ಆಹಾರವನ್ನು ಹೊಲಸು ಎನ್ನುತ್ತಾರೆ:
ಹಾಗೆಯೇ, ಸಸ್ಯಾಹಾರಿಗಳನ್ನೂ ಪುಳ್ಚಾರು ಎಂದು ಛೇಡಿಸುತ್ತರೆ.ಪರಸ್ಪರ ಆಹಾರವನ್ನು ಗೌರವದಿಂದ ಕಾಣಬೇಕು.ತಮ್ಮ ನೆಚ್ಚಿನ ಆಹಾರಕ್ಕೆ ಇಡಲಾಗಿರುವ ಹೊಲಸು ಎಂಬ ಹೆಸರನ್ನು ಒಂಚೂರು ಆಕ್ಷೇಪಣೆ , ಚಿಂತನೆ , ಸ್ವಾಭಿಮಾನ ಇಲ್ಲದೇ ಮೆದುಳಿಗೆ ಲಕ್ವಾ ಹೊಡೆದವರಂತೆ ಒಪ್ಪಿಕೊಂಡು, ಅದನ್ನೇ ವರಪ್ರಸಾದ ಎಂಬಂತೆ ಪಾಲಿಸುವವರ ಬೌದ್ಧಿಕ ದಾರಿದ್ರ್ಯದ ಬಗ್ಗೆ ಅಸಹ್ಯ ಎನಿಸುತ್ತದೆ. ಒಬ್ಬರ ಆಹಾರ ಪದ್ದತಿಯನ್ನು ಹೊಲಸು ಅನ್ನುವುದಕ್ಕಿಂತ ಅತ್ಯಂತ ಕ್ರೂರ ರೇಸಿಸಂ ಇನ್ನೇನಿದೆ ??
ಮೊದಲಿಗೆ ಈ ‘ಬಾಡೇ ನಮ್ಮ ಗಾಡು’ ಎಂಬುದು ಇನ್ಯಾರ ವಿರುದ್ಧವೋ ಮಾಡಬೇಕಿರುವ ಅಭಿಯಾನವಲ್ಲ . ಇದು ಅತ್ಯಂತ ಅವಶ್ಯಕವಾಗಿ ನಮ್ಮ ಆಹಾರ ಕ್ರಮದ ಬಗ್ಗೆಯೇ ನಮ್ಮೊಳಗಿರುವ ಕೀಳರಿಮೆಗಳನ್ನು ತೊಡೆದುಕೊಳ್ಳಲು ಮಾಡಬೇಕಾದ ಅಭಿಯಾನವಾಗಿದೆ ಎಂದು ಹೇಳಿದ್ದಾರೆ.

ಯಾರದೋ ಜನ್ಮದಿನ , ಇನ್ಯಾವುದೋ ಹಬ್ಬ ಎಂದು ಬಹುಸಂಖ್ಯಾತರ ಆಹಾರದ ಮೇಲೆ ಆ ದಿನಗಳಲ್ಲಿ ನಿಷೇಧ ಹೇರುವುದು ಮಾನವನ ಆಹಾರ ಹಕ್ಕಿನಂತ ಅತ್ಯಂತ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಕಿಂಚಿತ್ತಾದರೂ ಆತ್ಮಗೌರವ ಇದ್ದರೆ ಇಂತಹ ನಿಷೇಧಗಳೆಂಬ ದೌರ್ಜನ್ಯಗಳನ್ನು ಯಾವ ಕಾರಣಕ್ಕೂ ಸಹಿಸಿಕೊಳ್ಳಬಾರದು. ಮೊದಲಿಗೆ ಇಂತಹಾ ಎಲ್ಲಾ ನಿಷೇಧಗಳು ತೆರವಾಗಬೇಕು.
ವಾರದ ಆಚರಣೆ
ಬಾಡೇ ನಮ್ಮ ಗಾಡು ಎನ್ನುವ ಮೊದಲು ಆ ವಾರ ತಿನ್ನಲ್ಲ , ಈ ವಾರ ತಿನ್ನಲ್ಲ . ಶ್ರಾವಣದಲ್ಲಿ ತಿನ್ನಲ್ಲ , ಕಾರ್ತಿಕದಲ್ಲಿ ತಿನ್ನಲ್ಲ ಎಂಬ ಸೋಗಲಾಡಿತನ ಬಿಡಬೇಕು. ದೇವರಿಗಾಗಿ ತಿನ್ನಲ್ಲ, ದೇವಸ್ಥಾನಕ್ಕೆ ಹೋದಾಗ ತಿನ್ನಲ್ಲ ಅನ್ನುವುದು ಕೂಡಾ ತಮ್ಮ ಆಹಾರವನ್ನು ತುಚ್ಚವಾಗಿ ಕಾಣುವ ಇನ್ನೊಂದು ಮಜಲು.
ನಾನು ನಾಸ್ತಿಕನಾದರೂ ಚರ್ಚೆಯ ಸಲುವಾಗಿ ಆಸ್ತಿಕವಾದದ ಪರವಾಗಿಯೇ ಮಾತಾಡುವುದಾದರೆ ಮನುಷ್ಯ ದೇಹವೇ ಮೂಳೆ ಮಾಂಸದ ತಡಿಕೆಯಾಗಿರುವಾಗ ಯಾವ ದೇವರು, ಎಲ್ಲಿ ಹೇಳಿದ್ದಾರೆ ಇಂತಹಾ ವಾರ ಮಾಂಸ ಸೇವಿಸಬಾರದು , ಮಾಂಸ ಸೇವಿಸಿ ದೇವಸ್ಥಾನಕ್ಕೆ ಬರಬಾರದು ಎಂದು.
ಹೀಗೆ ಫರ್ಮಾನು ಹೊರಡಿಸಿದವರ ಮೂಲ ಉದ್ದೇಶ ನಿಮ್ಮ ಆಹಾರದ ಬಗ್ಗೆ ನಿಮ್ಮೊಳಗೆ ಕೀಳರಿಮೆ ತುಂಬುವುದಷ್ಟೇ.
ಜಿಂಕೆಯನ್ನು ಸೃಷ್ಟಿಸಿ ಅದನ್ನು ಹುಲಿಯ ಆಹಾರವನ್ನಾಗಿಸಿದ್ದು ನಿಮ್ಮ ದೇವರೆ ಅಥವಾ ನಾವು ದೇವರು ಅಂದುಕೊಳ್ಳುವ ಪ್ರಕೃತಿಯೇ ಅಲ್ಲವೇ ?? ಹುಲಿ , ಸಿಂಹಗಳು ಸೋಮವಾರ , ಶನಿವಾರ ಮಾಂಸಾಹಾರ ತ್ಯಜಿಸುತ್ತವೆಯೇ ???
ಅವರೇ ಹೇಳುವಂತೆ ಭಕ್ತಿ ಎಂಬುದು ಮನಸ್ಸಿನಲ್ಲಿ ಇರಬೇಕಿರುವುದೇ ಹೊರತು ಇಂತಹ ಯಾರದೋ ಮೂಗಿನ ನೇರದ ಅರ್ಥಹೀನ ಆಚರಣೆಗಳಲ್ಲಲ್ಲ.
ಅಲ್ಲಿ ನಾಗನಡೆ ಇದೆ, ಇಲ್ಲಿ ನಾಗನೆಡೆ ಇದೆ ಮನೆಯಲ್ಲಿ ಹೊಲಸು ಮಾಡಬೇಡೀ ಎಂದವರ ಮಾತು ನಂಬಿ ಚಾಚೂ ತಪ್ಪದೆ ಪಾಲಿಸುವವರಿಗೆ ,ಅದೇ ನಾಗ ಸಂದಿಗೊಂದಿಗಳಲ್ಲಿ ನುಗ್ಗಿ ಇಲಿ , ಕಪ್ಪೆಯನ್ನು ಹಿಡಿದು ಹಸಿಹಸಿಯಾಗಿ
ಭಕ್ಷಿಸುವುದು ಕಾಣುವುದಿಲ್ಲವೇ ??
ಬಹುಶಃ ದಾಸ್ಯ, ಮೌಡ್ಯ, ಅವಿವೇಕ, ಅಂಧಶ್ರದ್ಧೆ ನಮ್ಮ ಜನರ ನರನಾಡಿಗಳಲ್ಲಿ ಸೇರಿ ಹೋಗಿದೆ ಅನಿಸುತ್ತದೆ. ಗ್ರಹ , ಗ್ರಹಣ ,ಹಾವು ,ಹಪ್ಪಟೆ ಹೀಗೆ ಪ್ರಕೃತಿಯ ಒಂದೊಂದು ವಿಸ್ಮಯಗಳನ್ನು ತೋರಿಸಿ ಅದಕ್ಕೊಂದು ಕಥೆ ಕಟ್ಟಿ ಜನರ ಶೋಷಣೆ ಮಾಡುವುದು ದಿನೇ ದಿನೇ ಹೆಚ್ಚುತ್ತಲೇ ಇದೆ. ಅದಕ್ಕೆಲ್ಲಾ ಗುರಾಣಿಯಂತೆ ‘ನಂಬಿಕೆ’ ಅನ್ನೋ ಹೆಸರು.
ನಂಬಿಕೆಗಳನ್ನು ಪ್ರಶ್ನಿಸುವಂತಿಲ್ಲ ಎಂಬ ಕಟ್ಟಾ ಫರ್ಮಾನು ಬೇರೆ. ನಂಬಿಕೆ ಅನ್ನೋದೊಂದು anticipatory ರಕ್ಷಣಾ ವ್ಯವಸ್ಥೆ ಆಗಿಬಿಟ್ಟಿದೆ. ಯಾವುದೇ ವಿಷಯದಲ್ಲಿ ಪ್ರಶ್ನೆಯೆತ್ತಬಾರದು ಎಂದರೆ ಅವರ ಬಳಿ ಸಮಂಜಸ ಉತ್ತರವಿಲ್ಲ, ಅಲ್ಲೇನೋ ಹುಳುಕಿದೆ ಎಂದೇ ಅರ್ಥ.
ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ , ಎಲ್ಲಾ ಧರ್ಮಗಳಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ಇಂತಾ ಶೋಷಕರಿದ್ದಾರೆ.
ಆದರೆ ಜೀವಸಂಕುಲದಲ್ಲೆ ಸ್ವಂತಕ್ಕೆ ದೇಹದಲ್ಲೊಂದು ಅತ್ಯಂತ ಅಭಿವೃದ್ಧಿ ಹೊಂದಿರುವ ಮೆದುಳು ಹೊಂದಿರುವ ಮನುಷ್ಯ ಯಾವತ್ತೂ ಸತ್ಯವನ್ನು ಮಾತ್ರ ನಂಬಬೇಕು , ಸತ್ಯವು ಮಾತ್ರ ನಂಬಿಕೆಯಾಗಬೇಕು.

ಆಗಲೇ ಸ್ವಾಭಿಮಾನಿ,ವಿಚಾರವಂತ ಸಮಾಜವೊಂದರ ನಿರ್ಮಾಣ ಸಾಧ್ಯ ಎಂದು ಪೋಸ್ಟ್ ಮಾಡುವುದರ ಮೂಲಕ ವೈರಲ್ ಆಗಿದೆ. ಕವಿರಾಜ್ ಅವರ ಅಭಿಪ್ರಾಯಕ್ಕೆ, ಸಾಕಷ್ಟು ಕಾಮೆಂಟ್ ಬಂದಿದೆ.
ಸಾಕಷ್ಟು ಪೋಸ್ಟ್ ಗಳು ಶೇರ್ ಆಗಿದ್ದು, ಇಂದು ಒಂದು ಕೂಡ ಪೋಸ್ಟ್ ಹಾಕಿದ್ದಾರೆ.”ಈ ಮಟ್ಟಕ್ಕೆ ಒಂದು ಲೇಖನ ಹಲವು ಜನರ ವಿಚಾರ ಧಾರೆಯನ್ನೇ ಬದಲಾಯಿಸುವಷ್ಟು ಪ್ರಭಾವಶಾಲಿ ಎಂದರೆ ಅದಕ್ಕಿಂತ ಸಾರ್ಥಕತೆ ಇನ್ನೇನಿದೆ” ಎಂದು ಹೇಳಿದ್ದಾರೆ.
ಇನ್ನೊಂದು ಮಗ್ಗುಲಲ್ಲಿ ಇದು ಯಾವ ಧೂರ್ತ ಹಿತಾಸಕ್ತಿಗಳಿಗೆ ಸಹ್ಯವಾಗಲಿಲ್ಲವೋ ಅವರು ಅಸಭ್ಯ ಪದಗಳಲ್ಲಿ ನಿಂದಿಸಿಯೂ ಇದ್ದಾರೆ.
ಈ ರೀತಿಯ ದಾಳಿ ನನ್ನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆ ಹಲವು ಬಾರಿ ಆಗಿರುವುದರಿಂದ ಇದು ನನಗೆ ತೀರಾ ನಿರೀಕ್ಷಿತ ಮತ್ತು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಗಟ್ಟಿತನವನ್ನು ಇದೇ ಜನಗಳು ನನಗೆ ಬಹಳ ಹಿಂದೆಯೇ ಕಲಿಸಿಬಿಟ್ಟಿದ್ದಾರೆ.
“ನಿಂದಕರಿರಬೇಕು ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ..” ಅನ್ನೋ ಪುರಂದರದಾಸರ ಉಕ್ತಿಯನ್ನು ಸಂಪೂರ್ಣವಾಗೀ ಒಪ್ಪುವ ನಾನು ಇವೆಲ್ಲವನ್ನು ಎದುರಿಸಲು ಸಿದ್ಧನಾಗೇ ಇಂತಹಾ ವಿಚಾರಗಳ ಬಗ್ಗೆ ಬರೆಯುತ್ತೇನೆ. ಅಂತಹಾ ನಿಂದನೆಗಳು ನಿಜಾರ್ಥದಲ್ಲಿ ಇನ್ನಷ್ಟು ಬರೆಯುವ ಕೆಚ್ಚು ತುಂಬುತ್ತದೆ.
ಗಾಂಧೀಜಿ , ಅಂಬೇಡ್ಕರ್ , ಬಸವಣ್ಣ , ಬುದ್ಧ , ಕುವೆಂಪು ಅವರಂತಹ ಮಹಾತ್ಮರನ್ನೇ ಬಿಡದವರು ನನ್ನಂತ ಹುಲುಮಾನವನಿಗೆ ವಿನಾಯಿತಿ ನೀಡುತ್ತಾರೆಂಬ ಯಾವ ಭ್ರಮೆಯೂ ನನ್ನಲ್ಲಿಲ್ಲ.
ಮೆಚ್ಚುಗೆಯಂತೆ , ನಿಂದನೆಗಳಿಗೂ ಸಿದ್ಧವಾಗಿ ಶೋಷಿತರ ಪರ , ನ್ಯಾಯದ ಪರವಾದ ನನ್ನ ವಿಚಾರಗಳನ್ನು ಧೈರ್ಯವಾಗಿ ಹಿಂದೆಯೂ ಹಂಚಿಕೊಂಡಿದ್ದೇನೆ , ಮುಂದೆಯೂ ಹಂಚಿಕೊಳ್ಳಲ್ಲಿದ್ದೇನೆ ಎಂದು ಬರೆದಿದ್ದಾರೆ.