ದಕ್ಷಿಣ ಕನ್ನಡ:( ನ.08) Religious Belief: ದಕ್ಷಿಣ ಜಿಲ್ಲೆಯ ಸುಳ್ಯ ತಾಲೂಕಿನ ದೇವಾಲಯದಲ್ಲಿ ಇಂದಿಗೂ ಅಚ್ಚರಿ ಮೂಡಿಸುವಂತಹ ಘಟನೆಗಳು ನಡೆಯುತ್ತಿದೆ. ಸುಳ್ಯದ ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹಳ್ಳದಲ್ಲಿರುವ ದೇವರ ಮೀನುಗಳಿಗೆ ಆಹಾರ ಹಾಕಿದರೆ ಸಾಕು ಮೈ ಮೇಲಿದ್ದ ಚರ್ಮ ರೋಗಗಳೆಲ್ಲಾ ಶಮನವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಸೃಷ್ಟಿಯ ವಿಸ್ಮಯ:
ಈ ಪ್ರಕೃತಿ ಹಲವು ವಿಸ್ಮಯಗಳನ್ನು ಸೃಷ್ಠಿ ಮಾಡುತ್ತದೆ ಹೌದು, ವೈದ್ಯ ಲೋಕಕ್ಕೂ ಅಚ್ಚರಿಯಾಗುವಂತಹ ವಿಚಾರಗಳು ಸುಳ್ಯ ತಾಲೂಕಿನಲ್ಲಿ ನಡೆಯುತ್ತಿದೆ. ಜನರ ನಂಬಿಕೆಯಿಂದ ಮತ್ತು ಆಚರಣೆಯಿಂದ ಆ ವಿಸ್ಮಯಗಳು ಇಂದಿಗೂ ಅದೇ ಕುತೂಹಲತೆಯನ್ನು ಉಳಿಸಿಕೊಂಡಿದೆ.

ಮೀನುಗಳಿಗೆ ಆಹಾರ ಹಾಕಿದರೆ ಚರ್ಮರೋಗ ಮಾಯ:
ಸುಳ್ಯದ ಪುರಾತನ ಕ್ಷೇತ್ರವಾದ ತೋಡಿಕಾನ ಮಲ್ಲಿಕಾರ್ಜುನ ಕ್ಷೇತ್ರದ ಪಕ್ಕದಲ್ಲೇ ಹರಿಯುವಂತಹ ನದಿಯಲ್ಲಿ ಸಾವಿರಾರು ಸಂಖ್ಯೆಯ ಮೀನುಗಳಿದ್ದು, ಈ ಮೀನುಗಳಿಗೆ ಅಕ್ಕಿ ಹಾಗೂ ಹೊದಲು ಹಾಕಿ ಪ್ರಾರ್ಥನೆ ಮಾಡಿಕೊಂಡಲ್ಲಿ ಎಲ್ಲಾ ರೀತಿಯ ಚರ್ಮರೋಗಗಳು ಗುಣವಾಗುತ್ತದೆ ಎನ್ನುವ ನಂಬಿಕೆ ಇದೆ.
ದೇವಸ್ಥಾನದ ಇತಿಹಾಸ:
ಈ ದೇವಸ್ಥಾನದಲ್ಲಿ ಪೌರಾಣಿಕ ಕಥೆಯೊಂದಿದೆ. ಕಣ್ವ ಮಹರ್ಷಿಯು ತೋಡಿಕಾನ ಕ್ಷೇತ್ರದಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. ಕಣ್ವ ಮಹರ್ಷಿಗಳು ತೋಡಿಕಾನದ ಕಾಡಿನ ನಡುವೆ ತಪಸ್ಸನ್ನು ಮಾಡುತ್ತಿದ್ದ ಸಮಯದಲ್ಲಿ ಕ್ಷೇತ್ರದ ಪಕ್ಕದಲ್ಲೇ ಇರುವ ದೇವರಗುಂಡಿ ಎನ್ನುವ ಜಲಪಾತದಿಂದ ಶಿವಲಿಂಗವನ್ನು ತೋಡಿಕಾನ ಕ್ಷೇತ್ರಕ್ಕೆ ತರಲು ನಿರ್ಧರಿಸುತ್ತಾರೆ.

ಈ ಸಂದರ್ಭದಲ್ಲಿ ಕಣ್ವ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಮಹರ್ಷಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ಶಿವನ ಜೊತೆಗೆ ವಿಷ್ಣುವೂ ಮತ್ಸರೂಪದಲ್ಲಿ ಬಂದು ಮಹರ್ಷಿಯ ಆಸೆಯಂತೆ ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ತೋಡಿಕಾನ ಕ್ಷೇತ್ರ ತಲುಪುತ್ತಾರೆ. ಶಿವನು ಮತ್ಸ್ಯ ವಾಹನನಾಗಿ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುತ್ತಾನೆ.
ದೇವಸ್ಥಾನದಲ್ಲಿ ನೆಲೆಸಿದ್ದಾನೆ ಶಿವ:
ಕಣ್ವ ಮಹರ್ಷಿಗಳು ವಿಷ್ಣುವನ್ನು ಪ್ರಾರ್ಥಿಸಿ ಶಿವನ ಜೊತೆಗೆ ವಿಷ್ಣುವೂ ಕ್ಷೇತ್ರದಲ್ಲಿ ಸಾನಿಧ್ಯ ಪಡೆಯಬೇಕೆಂದು ಇಚ್ಚಿಸುತ್ತಾರೆ. ಈ ಕಾರಣಕ್ಕಾಗಿ ವಿಷ್ಣುವು ಮತ್ಸರೂಪದಲ್ಲಿ ಇಂದಿಗೂ ಈ ದೇವರಗುಂಡಿ ತೊರೆಯಲ್ಲಿ ನೆಲೆಸಿದ್ದಾನೆ ಎನ್ನುವುದು ಕ್ಷೇತ್ರ ಪುರಾಣವಾಗಿದೆ.
ಹರಕೆ ಕಟ್ಟಿಕೊಳ್ಳಬೇಕು:
ಲಕ್ಷಾಂತರ ಸಂಖ್ಯೆಯ ಮೀನುಗಳಿರುವ ಇಲ್ಲಿ ದೇಹಕ್ಕೆ ಕಾಡುವ ಚರ್ಮರೋಗಾಧಿಗಳ ನಿವಾರಣೆಗೆ ಇಲ್ಲಿಗೆ ಬಂದು ಪ್ರಾರ್ಥಿಸಿಕೊಂಡಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ.
ಮೀನುಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಹಾಗೂ ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತೇನೆಂದು ಪ್ರಾರ್ಥಿಸಿಕೊಂಡಲ್ಲಿ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ಮಾತಿದೆ.

ಧರ್ಮ ಭೇದವಿಲ್ಲದ ಕ್ಷೇತ್ರ:
ಕೇವಲ ಹಿಂದೂ ಭಕ್ತಾಧಿಗಳಲ್ಲದೆ ಈ ಮೀನುಗಳಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರೂ ಬಂದು ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತಾರೆ.
ಅಲ್ಲದೆ ತೋಡಿಕಾನ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆಯ ಬಳಿಕ ಅನ್ನ ಪ್ರಸಾದವನ್ನು ಮೊದಲು ಈ ಮೀನುಗಳಿಗೆ ಹಾಕುವ ಸಂಪ್ರದಾಯವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ.
ಮೀನುಗಳನ್ನು ಹಿಡಿಯುವಂತಿಲ್ಲ:
ದೇವರ ಮೀನುಗಳೆಂದೇ ಕರೆಯಲ್ಪಡುವ ಈ ಮೀನುಗಳನ್ನು ಹಿಡಿಯುವುದಾಗಲೀ, ಕೊಲ್ಲುವುದಾಗಲೀ ನಿಷಿದ್ಧವಾಗಿದೆ.
ಮೀನುಗಳಿಗೆ ಹರಕೆ ಹೊತ್ತರೆ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.