ಬೆಂಗಳೂರು : ಯುಜಿಸಿ ಆದೇಶದಂತೆ ಅಕಾಡೆಮಿಕ್ ವರ್ಷದ ಕ್ಯಾಲೆಂಡರ್ ನ್ನು ಪಾಲಿಸಿದ್ದರೆ ಈಗಾಗಲೇ ಅಕ್ಟೋಬರ್ 1 ರಿಂದ ಕಾನೂನು ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳು ತರಗತಿಯನ್ನು ಪ್ರಾರಂಭಿಸಬೇಕಾಗಿತ್ತು, ಆದರೆ ಈಗಾಗಲೇ ವಿದ್ಯಾರ್ಥಿಗಳು COVID-19 ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಸೆಮಿಸ್ಟರ್ ಸಂಪೂರ್ಣವಾಗಿ ಆನ್ ಲೈನ್ ನಲ್ಲ್ಲಿನಡೆದಿದೆ, ಅಷ್ಟೇ ಅಲ್ಲದೆ ತಮ್ಮ ಸಿಲೆಬಸ್ ಕೂಡ ಮುಗಿದಿಲ್ಲ,ಹಾಗಾಗಿ ಮುಂದಿನ ಸೆಮಿಸ್ಟರ್ ಗೆ ಬಡ್ತಿ ನೀಡಬೇಕೆಂದು ಹೈಕೋರ್ಟ್ ನ ಮೊರೆಹೋಗಿದ್ದಾರೆ.

ಇನ್ನೊಂದೆಡೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಸೆಪ್ಟೆಂಬರ್ 27 ರಂದು ಹೊರಡಿಸಿದ ಸುತ್ತೋಲೆಯಲ್ಲಿ 2020-21 ನೇ ಸಾಲಿಗೆ ಅನ್ವಯವಾಗುವಂತೆ ಸ್ನಾತಕ 2 ಮತ್ತು 4 ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ 2 ನೇ ಸೆಮಿಸ್ಟರ್ ನಿಯಮಿತ ವಿದ್ಯಾರ್ಥಿಗಳನ್ನು ಮುಂದಿನ ವರ್ಗಕ್ಕೆ ಬಡ್ತಿಗೊಳಿಸಿದೆ. ಆದರೆ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಮಾತ್ರ ಇತ್ತೀಚಿಗೆ ಬಡ್ತಿ ವಿಚಾರವಾಗಿ ಪ್ರಕರಣ ಹೈಕೋರ್ಟ್ ಅಂಗಳದಲ್ಲಿ ಇನ್ನೂ ಇತ್ಯರ್ಥವಾಗದೆ ಇರುವಂತಹ ಸಂದರ್ಭದಲ್ಲಿ ಮುಂಚಿತವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿತ್ತು, ಅದರಲ್ಲೂ ಮರು ಮೌಲ್ಯ ಮಾಪನ ಹಾಗೂ ಸವಾಲು ಮೌಲ್ಯಮಾಪನ ಬಂದ ನಂತರ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಬೇಕಾಗಿತ್ತು, ಆದರೆ ಇದ್ಯಾವುದನ್ನು ಪರಿಗಣಿಸದೆ ಕಾನೂನು ವಿವಿ ಅಕ್ಟೋಬರ್ 21 ರಿಂದ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡಿತ್ತು.

ಈಗಾಗಲೇ ಮುಂದಿನ ಸೆಮಿಸ್ಟರ್ ಗೆ ವಿದ್ಯಾರ್ಥಿಗಳನ್ನು ಬಡ್ತಿಗೊಳಿಸುವ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ನ ಧಾರವಾಡ ಮತ್ತು ಬೆಂಗಳೂರು ಪೀಠಗಳಲ್ಲಿ ರಿಟ್ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದಾಗಿ ಹೈಕೋರ್ಟ್ ನಲ್ಲಿ ತನಗೆ ಈ ವಿಚಾರವಾಗಿ ಹಿನ್ನಡೆಯಾಗಬಹುದು ಎಂದು ಭಾವಿಸಿ ಕಾನೂನು ವಿವಿ ಈಗ ಅಕ್ಟೋಬರ್ 21 ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ವಾಪಸ್ ತೆಗೆದುಕೊಂಡಿದೆ.
ಇದನ್ನೂ ಓದಿ : GLOBAL HUNGER INDEX 2021 – ಏನಿದು ಜಿಎಚ್ಐ 2021? ಪಾಕ್, ಬಾಂಗ್ಲಾ, ನೇಪಾಳ ಹಾಗೂ ಶ್ರೀಲಂಕಾಗಿಂತಲೂ ಹಿಂದುಳಿಯಿತು ಭಾರತ
ಅಕ್ಟೋಬರ್ 13 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಮರು ಮೌಲ್ಯ ಮಾಪನ ಹಾಗೂ ಸವಾಲು ಮೌಲ್ಯಮಾಪನ ಮುಗಿದ ನಂತರ ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ.ಇದರ ಅನ್ವಯ ಈಗ ನವೆಂಬರ್ ಎರಡನೇ ವಾರದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ. ಈಗ ಮುಂದಿನ ಸೆಮಿಸ್ಟರ್ ಗೆ ಬಡ್ತಿ ಮಾಡುವ ವಿಚಾರ ಅಕ್ಟೋಬರ್ 18 ರಂದು ಮತ್ತೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.ಆದರೆ ಈಗ ವಿದ್ಯಾರ್ಥಿಗಳು ಪರೀಕ್ಷೆ ನಡೆಸಲು ಕಾನೂನು ವಿವಿ ಮಾಡುತ್ತಿರುವ ವಿಳಂಭದಿಂದಾಗಿ ಈಗ ತಮಗೆ ಒಂದು ಅಕಾಡೆಮಿಕ್ ವರ್ಷ ನಷ್ಟವಾಗುತ್ತದೆ ಎನ್ನುತ್ತಾರೆ.

“ಎಲ್ಲವೂ ಯುಜಿಸಿ ಮಾರ್ಗಸೂಚಿ ನಿಯಮಗಳಂತೆ ಸುಗಮವಾಗಿ ನಡೆದಿದ್ದರೆ, ಈಗಾಗಲೇ 2 ಹಾಗೂ 4 ನೇ ಸೆಮಿಸ್ಟರ್ ನ ಕಾನೂನು ಪದವಿಯ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಬರೆದು ಅಕ್ಟೋಬರ್ 1 ರಿಂದ ಮುಂದಿನ ತರಗತಿಗಳಿಗೆ ಹಾಜರಾಗಬೇಕಾಗಿತ್ತು, ಆದರೆ ಈಗ ಬಂದಿರುವ ಹೊಸ ಪರೀಕ್ಷಾ ವೇಳಾ ಪಟ್ಟಿಯಿಂದಾಗಿ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಮತ್ತಷ್ಟು ವಿಳಂಬವಾಗುತ್ತದೆ .ಇದರಿಂದಾಗಿ ಈಗ ಕಾನೂನು ಪದವಿ ಪಡೆಯಲು ಮೂರು ವರ್ಷದ ಬದಲು ನಾಲ್ಕು ವರ್ಷ ಕಾಯಬೇಕಾಗುತ್ತದೆ.” ಎನ್ನುತ್ತಾರೆ ಹುಬ್ಬಳ್ಳಿಯಲ್ಲಿನ ಲಾ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ರಮೇಶ್.