ಮೈಸೂರು : ವಿಜಯದಶಮಿಯ ಸಂಭ್ರಮದ ದಿನವಾದ ಇಂದು ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಡೋಲು ಬಾರಿಸಿ, ಕಂಸಾಳೆಯಾಡಿ, ಕಲಾವಿದರೊಂದಿಗೆ ವೀರಗಾಸೆ ಕುಣಿತ ಮಾಡಿ ಕಲಾವಿದರೊಂದಿಗೆ ಸಂಭ್ರಮಿಸಿದರು.

ಅರಮನೆ ಆವರಣದಲ್ಲಿ ನೆರೆದಿದ್ದ ಕಲಾತಂಡಗಳ ಜೊತೆ ಕಲಾವಿದರಂತೆಯೇ ಡೋಲು ಬಾರಿಸಿದರು. ವೀರಗಾಸೆ ಕುಣಿತ ಮಾಡುವ ಕಲಾವಿದರನ್ನು ಹುರಿದುಂಬಿಸುವುದರ ಜೊತೆಗೆ ತಮ್ಮಲ್ಲಿನ ಜಾನಪದ ಕಲೆಯನ್ನು ಕೂಡ ಪ್ರದರ್ಶಿಸಿದರು.

ಇದೇ ವೇಳೆ ಗ್ರಾಮೀಣ ಕಲಾ ತಂಡಗಳನ್ನು ವೀಕ್ಷಿಸಿ, ಅವರ ಕಲೆಯನ್ನು ಪ್ರೋತ್ಸಾಹಿಸಿದರು. ಬೆಳಗ್ಗೆ 10 ಗಂಟೆಯಿಂದಲೇ ಅರಮನೆ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಬಳಿಕ ಮಾತನಾಡಿದ ಸಚಿವರು, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಕರೆತರಲಾಗಿದೆ. ಅವರೊಂದಿಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ ಆದರೆ ಅವರನ್ನು ಪ್ರೋತ್ಸಾಹಿಸಿ ಹುರಿದುಂಬಿಸಲು 1% ನಷ್ಟು ಕುಣಿತ ಮಾಡಲಾಯಿತು ಎಂದರು.

ಚಿನ್ನದ ಅಂಬಾರಿಯಲ್ಲಿ ಮೆರವಣಿಗೆಯಲ್ಲಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಮೊದಲು ಆಟೋ, ಮೊಬೈಲ್ ವ್ಯಾನ್ ನಲ್ಲಿ ಕರೆತರಲಾಗುತ್ತಿತ್ತು. ಆದರೆ ಈ ರೀತಿ ದೇವಿಯನ್ನು ಕರೆತರುವುದು ಸರಿಯಲ್ಲ ಎಂದು ಇದೇ ಮೊದಲ ಬಾರಿಗೆ ಉತ್ಸವ ಮೂರ್ತಿಯನ್ನು ಅರಮನೆಗೆ ಮೆರವಣಿಗೆಯಲ್ಲಿ ಕರೆತರುತ್ತಿರುವುದು ಎಂದು ಹೇಳಿದರು.
ಜಂಬೂ ಸವಾರಿ ವೀಕ್ಷಣೆಗೆ 500 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರು ಜಂಬೂ ಸವಾರಿ ವೀಕ್ಷಣೆ ಮಾಡಲಿದ್ದಾರೆ ಎಂದರು. ಈ ಬಾರಿ 6 ಸ್ತಬ್ಧ ಚಿತ್ರಗಳು ಸಾಗಲಿವೆ. ಜಂಬೂ ಸವಾರಿಯನ್ನು ದೂರದರ್ಶನ ನೇರಪ್ರಸಾರ ಮಾಡಲಿದೆ. ಇದರ ಜೊತೆಗೆ ಫೇಸ್ ಬುಕ್, ಯೂಟ್ಯೂಬ್, ವರ್ಚ್ಯುವಲ್ ಮೂಲಕ ಕೂಡ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಹೇಳಿದರು.