ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾಕ್ಕೆ ದಿನಗಣನೆ ಶುರುವಾಗಿದ್ದು ಈಗಾಗಲೇ ರಾಜ್ಯ ಸರ್ಕಾರ ಕೂಡ ದಸರಾ ಹಬ್ಬದ ಮಾರ್ಗಸೂಚಿ ಹೊರಡಿಸಿದೆ. ಇನ್ನೂ ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಯಾಗಿದ್ದು ಈ ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳು ಸದ್ಯ ಮೈಸೂರಿಗೆ ಪ್ರಯಾಣ ಬೆಳೆಸಿವೆ.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳು ಗಜಪಯಣದ ಹೆಸರಿನಲ್ಲಿ ಇಂದು ಮೈಸೂರಿಗೆ ಹೊರಡಲಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಗೇಟ್ನಲ್ಲಿ ಜಿಲ್ಲಾಡಳಿತದಿಂದ ಸರಳ ಹಾಗೂ ಸಾಂಪ್ರದಾಯಿಕವಾಗಿ ಸ್ವಾಗತಿಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮತ್ತಿಗೋಡು, ಕೊಡಗಿನ ದುಬಾರೆ ಹಾಗೂ ರಾಮಪುರ ಸಾಕಾನೆ ಶಿಬಿರಗಳಲ್ಲಿರುವ ಗಜಪಡೆಗಳಿಗೆ ನಾಲ್ಕೈದು ದಿನಗಳಿಂದ ವಿಶೇಷ ಆರೈಕೆ ನಡೆದಿದೆ. ಸತತ 2ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ಸಿದ್ಧನಾಗಿರುವ ಅಭಿಮನ್ಯುವಿನೊಂದಿಗೆ ಗೋಪಾಲಸ್ವಾಮಿ, ಅಶ್ವತ್ಥಾಮ ಆನೆಗಳು ಮತ್ತಿಗೋಡು ಶಿಬಿರದಲ್ಲೂ, ಕಾವೇರಿ, ವಿಕ್ರಮ, ಧನಂಜಯ ಕೊಡಗಿನ ದುಬಾರೆ ಕ್ಯಾಂಪಿನಲ್ಲಿ ಹಾಗೂ ರಾಮಪುರ ಶಿಬಿರದಲ್ಲಿ ಚೈತ್ರಾ, ಲಕ್ಷ್ಮೀ ಆನೆಗಳಿಗೆ ನಿತ್ಯವೂ ವಿಶೇಷ ಗಮನ ವಹಿಸಿ ಆರೈಕೆ ಮಾಡಲಾಗುತ್ತಿದೆ.
ಇಂದು ಬೆಳಗ್ಗೆ 11ಕ್ಕೆ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ ಆನೆಗಳನ್ನು ಬರಮಾಡಿಕೊಳ್ಳಲಾಗುತ್ತೆ ಗಜಪಡೆಗಳು ಮೈಸೂರಿನ ಅರಣ್ಯಭವನದಲ್ಲಿ ಮೂರು ದಿನಗಳ ಕಾಲ ತಂಗಲಿವೆ. ಇದೇ 16ರಂದು ಅರಣ್ಯ ಭವನದಲ್ಲಿ ಇಲಾಖೆಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಂತರ ಅರಮನೆಗೆ ಕಳುಹಿಸಿಕೊಡಲಾಗುತ್ತದೆ. ಇನ್ನೂ ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮಾವುತರು, ಕಾವಾಡಿಗರು ಈಗಾಗ್ಲೇ ಕೊರೋನಾ ಲಸಿಕೆ ನೀಡಲಾಗಿದೆ.