ಚಿಕ್ಕಬಳ್ಳಾಪುರ (ಸೆ.8): ಕಳ್ಳರನ್ನು ಹಿಡಿಯುವ ಪೊಲೀಸಪ್ಪನ ಬಳಿಯೇ ಕಳ್ಳತನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ನಗರದಲ್ಲಿ ನಡೆದಿದೆ. ಚಿಂತಾಮಣಿ ನಗರದ ವೈಷ್ಣವಿ ಜ್ಯೂವೆಲ್ಲರಿ ಶಾಪ್ನಲ್ಲಿ ಈ ಘಟನೆ ನಡೆದಿದ್ದು..ಕಳ್ಳನ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್ ಎಸ್ ಐ ರಾಮಕೃಷ್ಣಪ್ಪ ಎಂಬುವವರು ಜೇಬಿಗೆ ಕೈ ಹಾಕಿರುವ ಕಳ್ಳನೊರ್ವ 4 ಲಕ್ಷ ಮೌಲ್ಯದ ಚಿನ್ನದ ಬಳೆಗಳನ್ನ ಕಳವು ಮಾಡಿ ಪರಾರಿಯಾಗಿದ್ದಾನೆ. ಎಎಸ್ಐ ರಾಮಕೃಷ್ಣಪ್ಪ ಎಲ್ಐಸಿ ಪಾಲಿಸಿ ಮೂಲಕ ಬಂದ ಹಣದಲ್ಲಿ ಪತ್ನಿಗೆ ಚಿನ್ನದ ಬಳೆಗಳನ್ನ ಮಾಡಿಸಿದ್ದು…ಹಣ ನೀಡಿ ಚಿನ್ನದ ಬಳೆಗಳನ್ನ ತರಲು ಚಿನ್ನದಂಗಡಿಗೆ ಹೋಗಿದ್ರು..ಈ ವೇಳೆ ಚಿನ್ನದಂಗಡಿಯಲ್ಲಿ ಸೈಲಂಟಾಗಿ ಗ್ರಾಹಕನ ಸೋಗಿನಲ್ಲಿ ಬಂದಿರೋ ಕಳ್ಳನೊರ್ವ ರಾಮಕೃಷ್ಣಪ್ಪ ಜೇಬಿಗೆ ಕೈ ಹಾಕಿ ಜೇಬಲ್ಲಿದ್ದ ಚಿನ್ನದ ಬಳೆಗಳನ್ನ ಎಗರಿಸಿದ್ದಾನೆ.
ಆದ್ರೆ ಇದು ಎಎಸ್ಐ ಅವರ ಅರಿವಿಗೆ ಬಂದಿಲ್ಲ. ಇನ್ನೂ ಅಂಗಡಿಯಿಂದ ಮನೆಗೆ ಹೋಗುವಾಗ ಮಾರ್ಗಮಧ್ಯೆ ನೋಡಿಕೊಂಡಿದ್ದು ಚಿನ್ನದ ಬಳೆಗಳು ಕಂಡಿಲ್ಲ. ಇದ್ರಿಂದ ಅನುಮಾನಗೊಂಡು ಮತ್ತೆ ಚಿನ್ನದಂಗಡಿಗೆ ವಾಪಾಸ್ ಬಂದು ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಕಳ್ಳನ ಕೃತ್ಯ ಬಯಲಾಗಿದೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಎಸ್ ಎಸ್ ಐ ರಾಮಕೃಷ್ಣಪ್ಪ ದೂರು ದಾಖಲಿಸಿದ್ದಾರೆ.
