ಬೆಂಗಳೂರು : ಇಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ಜೆ.ಪಿ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತ ನಗರ ಪಾಲಿಕೆ ಚುನಾವಣೆ ಫಲಿತಾಂಶ ಕುರಿತಾದ ಹಲವಾರು ಹೇಳಿಕೆಗಳನ್ನು ನೀಡಿದರು. ಜೆಡಿಎಸ್ ನ ಸೋಲಿನ ಕುರಿತು ಹೇಳಿದ ಅವರು ನಾವು ಸೋಲು-ಗೆಲುವು ಅಂತ ನೋಡಿಕೊಂಡು ಕುಳಿತುಕೊಳ್ಳಲು ಆಗುವುದಿಲ್ಲ, ರಾಜಕೀಯದಲ್ಲಿ ಹಲವಾರು ಸೋಲು ಗೆಲುವು ಸಿಹಿ ಕಹಿಗಳನ್ನು ನೋಡಿದ್ದೆವೆ ಎಂದರು. ಇದೇ ವೇಳೆ ಮಾತನಾಡಿದ ಅವರು ಹುಬ್ಬಳ್ಳಿ-ಧಾರವಾಡದಲ್ಲಿ ಮೂರರಿಂದ ನಾಲ್ಕು ಸೀಟುಗಳನ್ನು ನಿರೀಕ್ಷಿಸಿದ್ದೆವು, ಅಲ್ಲಿ ಜೆಡಿಎಸ್ ಒಂದು ಸ್ಥಾನ ಪಡೆದಿದೆ, ಕಲಬುರಗಿಯಲ್ಲಿ ಅಷ್ಟು ನಿರೀಕ್ಷೆ ಇರಲಿಲ್ಲ ಆದರೂ ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದೆವೆ ಎಂದರು.

ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲ ಕಡೆ ಪೈಪೋಟಿ ಕೊಟ್ಟಿದ್ದೇವೆ. ಯಾರೂ ನಿರಾಶೆಯಾಗಬೇಕಿಲ್ಲ, ನಾವು ಹೆಚ್ಚಿನ ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತೇವೆ. ಪಕ್ಷ ಕಟ್ಟುವ ಕಡೆ ಹೆಚ್ಚು ಗಮನ ಕೊಡುತ್ತೇವೆ. ನಾನು ಮತ್ತು ಪಕ್ಷದ ಎಲ್ಲಾ ನಾಯಕರು ಒಳಗೊಂಡಂತೆ ಪಕ್ಷ ಕಟ್ಟುವ ಕೆಲಸಕ್ಕೆ ಆದ್ಯತೆ ಕೊಡುತ್ತೇವೆ. ಒಟ್ಟಾಗಿ ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡ್ತೀವಿ. ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಜೊತೆ ಸೇರಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಮಾತಾಡಿದ್ದರೆ ಅವರ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮ ತೆಗೆದುಕೊಳ್ತಾರೆ. ಕೋಲಾರ ವಿಚಾರದಲ್ಲಿ ಸಹಿಸಲು ಆಗಲ್ಲ ಕೀಳಾಗಿ ಮಾತನಾಡಿದ್ದರೆ ಕ್ರಮ ಅನಿವಾರ್ಯವಾಗಿದೆ, ಕ್ರಮ ತೆಗೆದುಕೋಳ್ಳುತ್ತಾರೆ. ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಚಾರ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ, ಕುಮಾರಸ್ವಾಮಿ ಹತ್ರವೂ ಮಾತಾಡಿದ್ದಾರೆ ಆದ್ರೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ. ಬಿಜೆಪಿ ಅವರು ನನ್ನ ಜೊತೆ ಯಾರೂ ಮಾತಾನಾಡಿಲ್ಲ. ಖರ್ಗೆ ಅವರು ಪಕ್ಷದವರನ್ನೇ ಸಂಪರ್ಕಿಸಿ ಮಾತಾಡಿದ್ದಾರೆ ಅನ್ಸುತ್ತೆ , ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಅವರು ಕೂತು ಮಾತಾಡ್ತಾರೆ ನೋಡೋಣ.
ಇದನ್ನೂ ಓದಿ : ಪಾಲಿಕೆ ಸೋಲು, ‘ಕೈ’ ಅಂಗಳ ಕೊತ ಕೊತ – ಟಗರು ವರ್ಸಸ್ ಕನಕಪುರ ಬಂಡೆ!
ಈ ಕುರಿತು ಮಾತನಾಡುತ್ತ ಜಿ ಟಿ ದೇವೆಗೌಡ ಬಗ್ಗೆ ಪ್ರಸ್ತಾಪಿಸಿದ ಅವರು ತಮಗೂ ಜಿಟಿಡಿಗೂ ಯಾವುದೇ ರಾಜಕೀಯ ಮಾತು-ಕಥೆಗಳಾಗಿಲ್ಲ ಅವರು ತಮ್ಮ ಮತ್ತು ತಮ್ಮ ಮಗನಿಗೆ ಟಿಕೇಟ್ ಕೊಡುವ ವಿಚಾರವಾಗಿ ಸಿದ್ದರಾಮಯ್ಯ ಹತ್ರ ಮಾತನಾಡಿದ್ದೀನಿ ಅಂತ ಹೇಳಿಕೊಂಡಿದ್ದಾರೆ. ಆದರೆ ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಆಗುವ ಯಾವುದೇ ರೀತಿಯ ಹೇಳಿಕೆ ಕೊಟ್ಟಿಲ್ಲ, ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಒಮ್ಮೆ ತಿರುಪತಿಗೆ ಹೋಗಿದ್ದಾಗ ಜಿ.ಟಿ.ದೇವೇಗೌಡ ಸಿಕ್ಕಿದ್ದರು, ಆಗ ನಾನೇ ನೋಡಿ ಕರೆದು ತಮಾಷೆ ಮಾಡಿದ್ದೆ, ನಿನ್ನ ದರ್ಶನ ಇಲ್ಲಿ ಆಯ್ತಲ್ಲಪ್ಪಾ ಎಂದಿದ್ದೆ, ಆಗ ನಿಮ್ಮ ದರ್ಶನ ಆಗಿದ್ದು ಖುಷಿ ಆಯ್ತು ಸರ್ ಅಂದಿದ್ರು ಅಷ್ಟೇ ವಾಸ್ತವದಲ್ಲಿ ಯಾವುದೇ ರಾಜಕೀಯ ಮಾತುಕತೆ ಆಗಿಲ್ಲ ಎಂದರು. ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿರಬಹುದು, ನನ್ನ ಜೊತೆ ಬಿಜೆಪಿಯ ಯಾವ ನಾಯಕರು ಮಾತನಾಡಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಮಾಧ್ಯಮದವರ ಮುಂದೆ ಮಾತನಾಡಿದರು.