ಪುಣೆ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಮೂಲಕ ಚಿನ್ನದ ಪದಕ ಗೆದ್ದ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಇಂದು ಪುನಾಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಮಾಜಿ ಕೋಚ್ ಶಿರಸಿಯ ಕಾಶೀನಾಥ್ ನಾಯ್ಕ್ ಅವರನ್ನು ಭೇಟಿಯಾಗಿ ಸಮಯ ಕಳೆದಿದ್ದಾರೆ.

ನೀರಜ್ ಚೋಪ್ರಾ ಟೋಕಿಯೋ ಒಲಂಪಿಕ್ಸ್ನಲ್ಲಿ ಚಿನ್ನಕ್ಕೆ ಮುತ್ತಿಡ್ತಾ ಇದ್ದಂತೆ ಇತ್ತ ಕಾಶೀನಾಥ್ ಹೆಸರು ಪ್ರಚಲಿತಕ್ಕೆ ಬಂದಿತ್ತು. ನೀರಜ್ ಚೋಪ್ರಾ ಪರಿಶ್ರಮದ ಹಿಂದೆ ಕನ್ನಡಿಗನ ಕೈ ಚಳಕ ಇದೆ ಎಂದು ಸುದ್ದಿಯಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಕೂಡ ಕಾಶೀನಾಥ್ ನಾಯ್ಕ್ಗೆ ಕರ್ನಾಟಕ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಆದ್ರೆ ಈ ಘೋಷಣೆ ಬೆನ್ನಲ್ಲೇ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ನೀರಜ್ ಚೋಪ್ರಾಗೆ ತರಬೇತಿ ನೀಡಿದ್ದೆ ಅಂತಾ ಹೇಳ್ತಿರೋ ಕಾಶೀನಾಥ್ ನಾಯ್ಕ್ ಯಾರೆಂದೇ ಗೊತ್ತಿಲ್ಲ. ಅಂತಹ ಯಾವುದೇ ವ್ಯಕ್ತಿ ತರಬೇತಿ ನೀಡಿಲ್ಲ ಎಂದು ಅದಿಲ್ಲೆ ಸುಮರಿವಾಲ್ಲಾ ಹೇಳಿದ್ದರು. ಕಾಶೀನಾಥ್ ಅವರು ತಮ್ಮ ಕೋಚ್ ಎಂದು ನೀರಜ್ ಚೋಪ್ರಾ ಹೇಳಿಲ್ಲ. ಅಥ್ಲೆಟಿಕ್ಸ್ ಫೆಡರೇಷನ್ ಕೂಡ ಈ ಬಗ್ಗೆ ಖಚಿತಪಡಿಸಿಲ್ಲ. ಹೀಗಿರುವಾಗ ಕರ್ನಾಟಕ ಸರ್ಕಾರ ಕಾಶೀನಾಥ್ ನಾಯ್ಕ್ಗೆ ಹೇಗೆ ಬಹುಮಾನ ಘೋಷಿಸಿದೆ ಎಂದು ಅದಿಲ್ಲೆ ಸುಮರಿವಾಲ್ಲಾ ಪ್ರಶ್ನಿಸಿದ್ದರು.

ಅಥ್ಲೆಟಿಕ್ಸ್ ಫೆಡರೇಷನ್ನ ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಕಾಶೀನಾಥ್ ನಾಯ್ಕ್ ಅವರು ಸುಳ್ಳು ಹೇಳಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೆ ಕಾಶಿನಾಥ್ ನಾಯ್ಕ್ ತಾವು 2015-17ರವರೆಗೆ ಪಟಿಯಾಲದ ಸೇನಾ ಕ್ರೀಡಾ ಸಂಕೀರ್ಣದಲ್ಲಿ ನೀರಜ್ ಚೋಪ್ರಾಗೆ ತರಬೇತಿ ನೀಡಿರುವುದು ತಿಳಿಸಿದ್ದರು. ಅಲ್ಲದೆ 2010 ರ ಕಾಮ್ವೆಲ್ತ್ ಕ್ರೀಡಾಕೂಟದಲ್ಲಿ ತಾನು ಕಂಚಿನ ಪದಕ ಗೆದ್ದಿದ್ದೇನೆ. ನಾನು ಕೋಚ್ ಆಗಿದ್ದೆನೋ ಇಲ್ಲವೋ ಎಂದು ನೀರಜ್ ಚೋಪ್ರಾ ಅವರೇ ಉತ್ತರ ಕೊಡಲಿದ್ದಾರೆ ಎಂದಿದ್ದರು.

ಈಗ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದ್ದು ಸ್ವತಃ ನೀರಜ್ ಚೋಪ್ರಾ ಕಾಶಿನಾಥ್ ನಾಯ್ಕ್ ಅವರ ಪುಣೆಯ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ತೆಗೆದುಕೊಂಡಿರುವ ಫೋಟೋಗಳು ಲಭ್ಯವಾಗಿದ್ದು. ಯಾವುದೇ ಅಹಂಕಾರವಿಲ್ಲದೆ, ಸಾಮಾನ್ಯನಂತೆ ಗುರುವಿನ ಮುಂದೆ ನೀರಜ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಾಜಿ ಕೋಚ್ ಕಾಶೀನಾಥ್ ನಾಯ್ಕ್ ವಿರುದ್ದ ಕೇಳಿ ಬಂದ ಆರೋಪಗಳಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ.