ಚೆನ್ನೈ: ತಮಿಳುನಾಡಿನಲ್ಲಿ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಆಡಳಿತಕ್ಕೆ ನೂರು ದಿನಗಳು ಪೂರ್ಣವಾದ ಬೆನ್ನಲೆ ಪ್ರಣಾಳಿಕೆಯಲ್ಲಿ ನೀಡಿದ್ದ ಮತ್ತೊಂದು ಭರವಸೆಯನ್ನು ಈಡೇರಿಸಿದೆ. ಇಂದು ತರಬೇತಿ ಪಡೆದ ಎಲ್ಲಾ ಜಾತಿಯ ಅರ್ಚಕರನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿ ಮಹತ್ವದ ಆದೇಶ ಹೊರಡಿಸಿದೆ.
ಇಂದು ಈ ಬಗ್ಗೆ ಡಿಎಂಕೆ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು ವಿವಿಧ ಸಮುದಾಯಗಳ 24 ತರಬೇತಿ ಪಡೆದ ‘ಅರ್ಚಕರನ್ನು’ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನೇಮಕಾತಿ ಆದೇಶಗಳನ್ನು 75 ಜನರಿಗೆ ನೀಡಿದ್ದು, ವಿವಿಧ ವರ್ಗಗಳ ಅಡಿಯಲ್ಲಿ 208 ಹುದ್ದೆಗಳಿಗೆ ನೇಮಕಾತಿ ಮಾಡಿದ್ದಾರೆ. ನೇಮಕಾತಿಯಲ್ಲಿ ಔಪಚಾರಿಕವಾಗಿ ತರಬೇತಿ ಪೂರ್ಣಗೊಳಿಸಿದ ವಿವಿಧ ಜಾತಿಯ 24 ಅರ್ಚಕರೂ ಸೇರಿದ್ದಾರೆ.
24 ಮಂದಿ ಆಕಾಂಕ್ಷಿಗಳು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಲು ತರಬೇತಿ ಪಡೆದಿದ್ದಾರೆ, ಇತರ 34 ಮಂದಿ ಇತರ ‘ಪಾಠ ಶಾಲೆಗಳಲ್ಲಿ’ ಅರ್ಚಕ ತರಬೇತಿ ಪೂರ್ಣಗೊಳಿಸಿದ್ದಾರೆ. 208 ನೇಮಕಾತಿಗಳಲ್ಲಿ ಭಟ್ಟಾಚಾರ್ಯರು, ಒಡುವರು, ಪೂಜಾರಿಗಳು, ತಾಂತ್ರಿಕರು ಮತ್ತು ಕಚೇರಿ ಸಹಾಯಕರು ಸೇರಿದ್ದು, ಸೂಕ್ತ ನೇಮಕಾತಿ ಪ್ರಕ್ರಿಯೆಯ ನಂತರ ನೇಮಕಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.