ಬೆಂಗಳೂರು : ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿ ಮಾಡಿದ್ದು, ಲಾಕ್ಡೌನ್ನಿಂದ ಸಮಸ್ಯೆ ಅನುಭವಿಸುತ್ತಿರುವ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಚಾಲಕರಿಗೆ ಸಹಾಯಧನ ನೀಡಲು ಸರ್ಕಾರ ತಿರ್ಮಾನಿಸಿದೆ. ಈ ಹಿನ್ನಲೆಯಲ್ಲಿ ಸಹಾಯಧನ ಬಯಸುವ ಚಾಲಕರು ಇಂದಿನಿಂದ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಲಾಕ್ಡೌನ್ ಸಮಸ್ಯೆಗೆ ಒಳಗಾಗಿರುವ ವಿವಿಧ ವರ್ಗದ ಜನರಿಗೆ ಸಹಾಯಧನ ನೀಡಲಾಗುತ್ತಿದೆ. ಅದರಲ್ಲಿ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಸೇರಿದ್ದಾರೆ. ಈ ಚಾಲಕರಿಗೆ ತಲಾ 3 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಈ ಸಹಾಯಧನ ಪಡೆಯುವ ಸಂಬಂಧ ಸೇವಾಸಿಂಧು ವೆಬ್ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸಾರಿಗೆ ಇಲಾಖೆ ತಿಳಿಸಿತ್ತು. ಅದರಂತೆ ಗುರುವಾರ (ಮೇ.27) ಬೆಳಗ್ಗೆ 11 ಗಂಟೆಯಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಅರ್ಹ ಚಾಲಕರು ಅರ್ಜಿ ಸಲ್ಲಿಸಿ ಸರ್ಕಾರದ ಪರಿಹಾರ ಪಡೆಯುವಂತೆ ಸೂಚಿಸಲಾಗಿದೆ.

ಸೇವಾಸಿಂಧುನಲ್ಲಿ ಅರ್ಜಿ ಸಲ್ಲಿಸುವ ಚಾಲಕರ ಅರ್ಜಿ ಪರಿಶೀಲಿಸಿದ ನಂತರ ಅವರ ಖಾತೆಗೆ ನೇರವಾಗಿ ಸಹಾಯಧನ ವರ್ಗಾಯಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಅಲ್ಲದೆ, ಸೇವಾ ಸಿಂಧು ಪೋರ್ಟಲ್ ಹೊರತುಪಡಿಸಿ ಬೇರೆ ಯಾವುದೇ ರೂಪದಲ್ಲೂ ಅರ್ಜಿ ಸಲ್ಲಿಸುವಂತಿಲ್ಲ ಎಂದು ಇಲಾಖೆ ಚಾಲಕರಿಗೆ ತಿಳಿಸಿದೆ. ಜತೆಗೆ ಸಹಾಯಧನ ಕೊಡಿಸುತ್ತೇವೆ ಎಂದು ವಂಚಿಸುವವರ ವಿರುದ್ಧವೂ ಎಚ್ಚರವಹಿಸುವಂತೆ ಮನವಿ ಮಾಡಿದೆ.
ಅರ್ಜಿ ಜತೆ ಸಲ್ಲಿಸಬೇಕಿರುವ ದಾಖಲೆಗಳು
- 2021ರ ಏಪ್ರಿಲ್ 24ರವರೆಗೆ ಚಾಲ್ತಿಯಲ್ಲಿರುವ ಚಾಲನಾ ಪರವಾನಗಿ (ಡಿಎಲ್)
- ಒಂದು ವಾಹನಕ್ಕೆ ಒಬ್ಬ ಚಾಲಕರು ಮಾತ್ರ ಅರ್ಜಿ ಸಲ್ಲಿಸಬೇಕು
- ಅರ್ಜಿ ಜತೆ ಆಧಾರ್ ಕಾರ್ಡ್, ವಾಹನ ನೋಂದಣಿ ಸಂಖ್ಯೆ, ಚಾಲನಾ ಪರವಾನಗಿ ಸಲ್ಲಿಸಬೇಕು
- ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ನೀಡಬೇಕು.