ಬೆಂಗಳೂರು : ಬ್ಲಾಕ್ ಫಂಗಸ್, ಕಪ್ಪು ಶಿಲೀಂದ್ರ ಸಮಸ್ಯೆ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ ಎಂದು ಕರೆಯಲಾಗುವ ಈ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲ್ಲಿ ಸೇರಿಸಿ ಅಧಿಸೂಚನೆ ಹೊರಡಿಸಿ, ಉಚಿತ ಚಿಕಿತ್ಸೆ ನೀಡಬೇಕು ಎಂದು ಮಾಜಿ ಸಿಎಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೋವಿಡ್ ರೋಗಕ್ಕೆ ತುತ್ತಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವವರಲ್ಲಿ ಮಾರಣಾಂತಿಕವಾಗಿ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ನಿಂದಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕಿ ಬಂದವರನ್ನು ಗುರಿ ಮಾಡಿಕೊಂಡು ದಾಳಿ ಮಾಡುತ್ತಿದೆ
ಬಡವರು, ಮಧ್ಯಮ ವರ್ಗದವರಿಗೂ ಕೂಡ ಸೂಕ್ತ ಚಿಕಿತ್ಸೆ ಪಡೆಯಲಾಗದಷ್ಟು ಈ ಖಾಯಿಲೆ ದುಬಾರಿಯಾಗಿದೆ. ಈ ರೋಗ ಬಂದವರಿಗೆ ದಿನಕ್ಕೆ ಮೂರರಂತೆ ೩೦ ದಿನಗಳವರೆಗೂ ಆಂಫೊಟೆರೆಸಿನ್ ಎಂಬ ಇಂಜೆಕ್ಷನ್ಗಳನ್ನು ನೀಡಬೇಕಾಗುತ್ತದೆ. ಆದರೆ ಮಾರುಕಟ್ಟೆಯಲಿ ಈ ಔಷಧಗಳು ಸಿಗುತ್ತಿಲ್ಲ. ಒಂದೊಂದು ಇಂಜೆಕ್ಷನ್ನ ಬೆಲೆ ಕಾಳಸಂತೆಯಲ್ಲಿ ಈಗಾಗಲೇ ೫ ರಿಂದ ೭ ಸಾವಿರ ರೂ.ಗಳವರೆಗೆ ಮಾರಾಟವಾಗುತ್ತಿವೆ ಎಂಬ ದೂರುಗಳು ಬರುತ್ತಿವೆ.
ಕೋವಿಡ್ ಸಾಂಕ್ರಾಮಿಕವನ್ನು ಅತ್ಯಂತ ಅರಾಜಕವಾಗಿ ನಿರ್ವಹಿಸುತ್ತಿರುವ, ಸತ್ತವರು ಸಾಯಲಿ ಎಂಬಂತೆ ನಡದುಕೊಳ್ಳುತ್ತಿರುವ ಸರ್ಕಾರ ಬ್ಲಾಕ್ ಫಂಗಸ್ ರೋಗದ ಕುರಿತು ಇನ್ನೂ ಕೂಡ ಸಮರ್ಪಕ ನಿರ್ಧಾರ ತೆಗೆದುಕೊಂಡಿಲ್ಲ. ಚಿಕಿತ್ಸೆ ನೀಡುವ ಕುರಿತಾದಂತೆ ಅಷ್ಟೆ ಅಲ್ಲ. ರೋಗ ಹರಡುತ್ತಿರುವ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ. ರೋಗ ಯಾರಲ್ಲಿ ಹರಡುತ್ತಿದೆ? ಏಕೆ ಹರಡುತ್ತಿದೆ? ಯಾವಾಗ ಹರಡುತ್ತಿದೆ? ರೋಗ ಲಕ್ಷಣಗಳೇನು? ರೋಗ ಬಂದರೆ ಹೇಗೆ ಚಿಕಿತ್ಸೆ ಪಡೆಯಬೇಕು? ರೋಗ ಬರದಂತೆ ತಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು? ಕೋವಿಡ್ ಚಿಕಿತ್ಸೆಯಿಂದ ಈ ಶಿಲೀಂದ್ರ ಸೋಂಕು ಬರುತ್ತದೆ ಅಂತಾದರೆ, ಕೋವಿಡ್ ಚಿಕಿತ್ಸೆಯಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಟುಗಳೇನು? ಎಂಬೆಲ್ಲ ವಿಚಾರಗಳ ಕುರಿತು ಸಮರ್ಪಕ ಎಸ್ಓಪಿ ಯನ್ನು ಹೊರಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪ್ರತಿವಾರ ಸುಮಾರು ೪೦೦ ಜನಕ್ಕೆ ಈ ಸೋಂಕು ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಚಿಕಿತ್ಸೆ ನೀಡಲು ಬೇಕಾದ ತಯಾರಿಯನ್ನು ಇನ್ನೂ ಮಾಡಿಕೊಂಡಂತೆ ಕಾಣುತ್ತಿಲ್ಲ. ಹರಿಯಾಣ ಸರ್ಕಾರ ಈಗಾಗಲೇ ಈ ರೋಗವನ್ನು ಅಧಿಕೃತ ರೋಗವೆಂದು ಅಧಿಸೂಚನೆ ಹೊರಡಿಸಿದೆ. ಪ್ರತಿ ಪ್ರಕರಣವನ್ನು ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿಗೆ ವರದಿ ಮಾಡಬೇಕೆಂದು ಅಲ್ಲಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅದರಂತೆಯೇ ರಾಜ್ಯದಲ್ಲೂ ಕೂಡಲೇ ಈ ರೋಗವನ್ನು ಅಧಿಕೃತ ರೋಗಗಳ ಪಟ್ಟಿಗೆ ಸೇರಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಮಧುಮೇಹ ಮುಂತಾದ ಸಮಸ್ಯೆ ಇದ್ದು ಕೋವಿಡ್ ಬಂದವರನ್ನು ಕನಿಷ್ಟ ಮೂರು ತಿಂಗಳ ಕಾಲ ಗಮನಿಸುತ್ತಿರಬೇಕು. ಜೊತೆಗೆ ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ವಿವರಗಳನ್ನು ಮತ್ತು ಹೆಚ್ಚು ಸ್ಟಿರಾಯ್ಡ್ ನೀಡಲಾಗಿರುವವರ ಪಟ್ಟಿಯನ್ನು ತಾಲ್ಲೂಕುವಾರು, ವಾರ್ಡ್ ವಾರು ಸಿದ್ಧಪಡಿಸಿಕೊಂಡು ಅವರನ್ನೂ ಸಹ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ನಿಗಾವಹಿಸಬೇಕು. ಈ ನಿಗಾ ಅವಧಿಯಲ್ಲಿ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಉಚಿತವಾಗಿ ಸಮರ್ಪಕ ಚಿಕಿತ್ಸೆಯನ್ನು ನೀಡಬೇಕು. ಅದಕ್ಕೂ ಮೊದಲು ಈ ಕೂಡಲೇ ಈ ರೋಗಕ್ಕೆ ಚಿಕಿತ್ಸೆ ನೀಡಲು ಜಿಲ್ಲಾವಾರು ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿ, ಅಧಿಸೂಚನೆ ಹೊರಡಿಸಬೇಕು. ಚಿಕಿತ್ಸೆಗಾಗಿ ಅಗತ್ಯ ಇರುವಷ್ಟು ಆಂಫೊಟೆರೆಸಿನ್ ಮುಂತಾದ ಔಷಧಗಳನ್ನು ಕೂಡಲೇ ಅಂದಾಜು ಮಾಡಿ ತರಿಸಿಕೊಳ್ಳಬೇಕು.
ಈ ಅವಧಿಯಲ್ಲಿ ಅವೈಜ್ಞಾನಿಕವಾಗಿ ಸಗಣಿ ಮುಂತಾದವುಗಳನ್ನು ಬಳಸಿ ಎಂದು ಹೇಳಿ ಜನರ ಸಾವಿಗೆ ಕಾರಣರಾಗುತ್ತಿದ್ದರೆ ಅಂಥವರ ಮೇಲೆ ಮುಲಾಜಿಲ್ಲದೆ ಕೊಲೆ ಮೊಕದ್ದಮೆಯನ್ನು ಹೂಡಬೇಕು. ರೋಗಗಳ ಭೀಕರ ಅಂಧಕಾರವು ಮನುಷ್ಯ ಸಮುದಾಯಗಳ ಮೇಲೆ ಕವುಚಿ ಬಿದ್ದಿರುವ ಈ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಮಾತ್ರ ಮೊದಲ ಆದ್ಯತೆಯನ್ನು ನೀಡಬೇಕು.
ಈ ಹಿನ್ನೆಯಲ್ಲಿ ಸರ್ಕಾರ ತಡಮಾಡದೆ ಸೂಕ್ತ ಅಧಿಸೂಚನೆಗಳನ್ನು ಹೊರಡಿಸಿ ಉಚಿತ ಚಿಕಿತ್ಸೆ ನೀಡಲು ಪ್ರಾರಂಭಿಸಬೇಕು. ಈಗಾಗಾಲೇ ಬಹಳಷ್ಟು ಜನರು ಬ್ಲಾಕ್ ಫಂಗಸ್ಸಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಅಂಥವರಿಗೆ, ಅಂಥವರ ಕುಟುಂಬ ಸೂಕ್ತ ಪರಿಹಾರ ನೀಡಬೇಕು. ಈ ರೋಗವು ಇನ್ನಷ್ಟು ಅಮೂಲ್ಯ ಜೀವಗಳನ್ನು ಹೊತ್ತೊಯ್ಯುವ ಮೊದಲು ಕೂಡಲೇ ಉಚಿತ ಚಿಕಿತ್ಸೆ ನೀಡಲು ಆರಂಭಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.