ಸಿಂಧನೂರು (ರಾಯಚೂರು): ನಗರದ ನಟರಾಜ ಕಾಲೋನಿ ನಿವಾಸಿ ಬಸವರಾಜ (43) ಅವರು ಬುಧವಾರ ಬೆಳಿಗ್ಗೆ ನಿಂಬೆರಸ ಮೂಗಿಗೆ ಬಿಟ್ಟುಕೊಂಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ನಿಂಬೆರಸ ಬಿಟ್ಟುಕೊಂಡಿದ್ದರಿಂದ ಎರಡು ಬಾರಿ ವಾಂತಿಯಾಗಿದೆ. ಆನಂತರ ನೆಲಕ್ಕೆ ಕುಸಿದಿದ್ದರಿಂದ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಅವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲ.
ಲಿಂಗಸುಗೂರು ತಾಲ್ಲೂಕು ರಾಮತ್ನಾಳ ಗ್ರಾಮದ ಬಸವರಾಜ ಅವರು 2002 ರಲ್ಲಿ ಸಿಂಧನೂರಿನ ಶರಣಬಸವೇಶ್ಚರ ಕಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ನೇಮಕವಾಗಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.