ಬೆಂಗಳೂರು : ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತೆ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡಿದ್ದಾರೆ. ಎರಡು ಪುಟಗಳ ಪತ್ರ ಬರೆದಿರುವ ಅವರು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡುವಂತೆ ಸೂಚಿಸಿದ್ದಾರೆ.
ತಮ್ಮ ಸುದೀರ್ಘ ಪತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಅದಕ್ಷ, ಬೇಜಬ್ದಾರಿ ಮತ್ತು ಭಷ್ಟ್ರ ಸರ್ಕಾರ ಕೇಂದ್ರ ಮತ್ತು ರಾಜ್ಯ ಎರಡು ಕಡೆ ಆಳ್ವಿಕೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ತಜ್ಞರು ಮತ್ತು ಪರಿಣಿತರು 2020ರ ನವೆಂಬರ್ ತಿಂಗಳಲ್ಲಿಯೇ ಕೋವಿಡ್ 2ನೇ ಅಲೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹೊತ್ತಿಗೆ ತನ್ನ ಭೀಕರತೆಯನ್ನು ಪ್ರದರ್ಶಿಸಲಿದೆ ಎಂದು ಹೇಳಿದ್ದರು. ಈ ವರದಿಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಬದಲಾಗಿ ಕೇಂದ್ರದ ಆರೋಗ್ಯ ಸಚಿವರುಗಳಾದಿಯಾಗಿ ಅನೇಕರು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿಯೇ ನಾವು ಕೋವಿಡ್ ವಿರುದ್ದ ಜಯ ಸಾಧಿಸುವ ಹಂತಕ್ಕೆ ಬಂದಿದ್ದೇವೆ. ಕೊರೊನಾವನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಜಯಘೋಷ ಮಾಡಲಾರಂಭಿಸಿದರು.

ತಜ್ಞರ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಲ್ಯಾಬುಗಳು, ಆಸ್ಪತ್ರೆಗಳು, ಹಾಸಿಗೆಗಳು, ಆಕ್ಸಿಜನ್ ವ್ಯವಸ್ಥೆ, ಐ.ಸಿ.ಯು, ವೆಂಟಿಲೇಟರ್ಗಳು, ಕೋವಿಡ್ ನಿಯಂತ್ರಣಕ್ಕೆ ಬೇಕಾದ ಔಷಧಿಗಳು ಇತ್ಯಾದಿಯಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದರೆ ಇವತ್ತಿನ ಈ ಅನಾಹುತವನ್ನು ತಪ್ಪಿಸಬಹುದಾಗಿತ್ತು.
ಈ ಸಿದ್ದತೆಗಳನ್ನೇನೂ ಮಾಡಿಕೊಳ್ಳದ ಕಾರಣದಿಂದಾಗಿಯೇ ಇಂದು ಜನರು ಅನಾಥರಂತೆ ರಸ್ತೆಗಳಲ್ಲಿ, ಆಸ್ಪತ್ರೆಯ ವರಾಂಡಗಳಲ್ಲಿ ಮರಣ ಹೊಂದುತ್ತಿದ್ದಾರೆ. ಹಾಗಾಗಿ ಜನ ಕೊರೊನಾದಿಂದ ಮರಣ ಹೊಂದಿದರು ಎಂಬುದಕ್ಕಿಂತ ಬಿ.ಜೆ.ಪಿ. ಸರ್ಕಾರಗಳು ತಮ್ಮ ಅದಕ್ಷತೆ ಮತ್ತು ಉಡಾಫೆ ಸ್ವಭಾವದಿಂದಾಗಿ ಅಮಾಯಕ ಜನಗಳ ಕೊಲೆಗಳಿಗೆ ಕಾರಣರಾಗುತ್ತಿವೆ. ಮರಣ ಹೊಂದುತ್ತಿರುವ ಬಹುಪಾಲು ಜನರು ರಾಜಕೀಯ ನಿರ್ಲಕ್ಷ್ಯದಿಂದ ಆದ ಕೊಲೆಗಳು ಎನ್ನದೆ ಅನ್ಯ ದಾರಿ ಇಲ್ಲ ಎಂದು ಸಿದ್ದು ಆಕ್ರೋಶ ಹೊರ ಹಾಕಿದ್ದಾರೆ.
ಈಗ ಸರ್ಕಾರದ ಏಕಾಏಕಿ ಲಾಕ್ಡೌನ್ ವಾತಾವರಣ ಸೃಷ್ಟಿಸಿದ್ದು ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಸಂಧರ್ಭದಲ್ಲಿ ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸಬೇಕಾಗಿತ್ತು. ಆದರೆ ಜನರಿಗೆ ನೀಡುವ ಪಡಿತರ ಅಕ್ಕಿಯನ್ನು 2 ಕೆ.ಜಿ ಗೆ ಇಳಿಸಲಾಗಿದೆ. ಇಂದಿರಾ ಕ್ಯಾಂಟಿನ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ರೈತರು ಬಳಸುವ ರಸಗೊಬ್ಬರ ದರಗಳನ್ನು ಕ್ವಿಂಟಾಲ್ಗೆ 1400 ಗಳಷ್ಟು ಹೆಚ್ಚು ಮಾಡಲಾಗಿದೆ. ದುಡಿಮೆಯಿಲ್ಲದೆ ಕೈಯಲ್ಲಿ ಹಣವಿಲ್ಲದಿರುವಾಗ ಸರ್ಕಾರ ಅವರ ಕಡೆಯ ಹನಿ ರಕ್ತವನ್ನೂ ಹೀರಲು ಹೊರಟಿದೆ. ಇಂತಹ ಜನದ್ರೋಹಿ ಆಡಳಿತವನ್ನು ನಾನು ಚರಿತ್ರೆಯಲ್ಲಿ ಎಲ್ಲೂ ನೋಡಿಲ್ಲ

ಇಂತಹ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಕಳೆದ ಬಾರಿ ಜನರ ಜೊತೆ ನಿಂತು ಅನ್ನ, ಆಹಾರದ ವ್ಯವಸ್ಥೆಯನ್ನು ಮಾಡಲು ಸಾಕಷ್ಟು ಶ್ರಮಿಸಿದ್ದೀರಿ. ಹಾಗೆಯೇ ರೈತರು ಬೆಳೆದ ತರಕಾರಿ, ಹಣ್ಣು ಇತರೆ ಉತ್ಪನ್ನಗಳನ್ನು ಖರೀದಿಸಿ, ಜನರಿಗೆ ತಲುಪಿಸುವ ಸ್ತುತ್ಯಾರ್ಹವಾದ ಕೆಲಸಗಳನ್ನು ಮಾಡಿದ್ದೀರಿ. ಇವೆಲ್ಲವನ್ನು ಜನತೆ ಕೃತಜ್ಞತೆಯಿಂದ ನೆನೆಸುತ್ತಿದ್ದಾರೆ.
ಕೋವಿಡ್ನ 2ನೇ ಅಲೆ ರಾಕ್ಷಸ ರೂಪವನ್ನು ತಳೆಯುತ್ತಿರುವ ಈ ಸಂದರ್ಭದಲ್ಲೂ ಸಹ ತಾವುಗಳು ಜನರ ಜೊತೆ ನಿಂತು, ಆಸ್ಪತ್ರೆ, ಆಕ್ಸಿಜನ್, ಔಷಧಿಗಳು, ಆಂಬ್ಯುಲೆನ್ಸ್ಗಳು, ಇನ್ನಿತರ ಚಿಕಿತ್ಸೆಗಳಿಗೆ ನೆರವಾಗಬೇಕೆಂದು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಸಹ ಕಳೆದ ವರ್ಷದಂತೆಯೇ ಈ ವರ್ಷವೂ ಮಾಡುವ ಮೂಲಕ ಜನರ ಸಕಲ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಕಾರ್ಯಗಳನ್ನು ಮಾಡಬೇಕೆಂದು ತಮ್ಮ ಶಾಸಕರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.